
ಚಿತ್ರಕೃಪೆ: ಫ್ಲಿಕರ್
`ಕಳ್ಳಕುಳ್ಳ’ ಬ್ಲ್ಯಾಗ್ನ ಸಹವರ್ತಿ ಚೇತನ್ ನಾಡಿಗೇರ್ ಹಿಂದೊಮ್ಮೆ ಇದೇ ಬ್ಲ್ಯಾಗ್ನಲ್ಲಿ `ನೀನಾನಾದ್ರೆ ನಾನೀನೇನಾ’ ಎಂಬ ಕತೆಯೊಂದನ್ನು ಬರೆದಿದ್ದರು. ಕತೆ ಬರೆಯುವ ಸಾಮರ್ಥ್ಯ ಇದ್ದೂ ಬರೆಯದ ವ್ಯಕ್ತಿಗಳಲ್ಲಿ ಚೇತನ್ ಒಬ್ಬರು. ಅನೇಕ ಕತೆಯ ಎಳೆಯನ್ನು ತಮ್ಮ ಸ್ನೇಹಿತರ ಬಳಿ ಆಗಾಗ ಹೇಳುತ್ತಾ, `ಬರೆದುಬಿಡುತ್ತೇನೆ, ಬರೆದೇಬಿಡುತ್ತೇನೆ’ ಎಂದು ಹೆದರಿಸುವ ಇವರು, ಇತ್ತೀಚೆಗೆ ಹಾಗೇ ಹೇಳಿ, ಹೆದರಿಸಿ ಅನಂತರ ಕತೆಯೊಂದನ್ನು ಬರೆದುಕೊಂಡೇ ಬಂದು ಅಚ್ಚರಿ ಮೂಡಿಸಿದ್ದಾರೆ.
ಈ ಬ್ಲಾಗ್ನ `ತಿಳಿಯ ಹೇಳುವೆ ಇಷ್ಟಕತೆಯನು’ ಮಾಲಿಕೆಯ ಮೊದಲ ಕತೆಯಾಗಿ ಚೇತನ್ಬರೆದ `ಗುರುವಿನ ಗುಲಾಮನಾಗುವತನಕ’ವನ್ನು ಪ್ರಕಟಿಸಲಾಗುತ್ತದೆ. ವ್ಯಂಗ್ಯವೇ ಕತೆಯಾಗಿರುವ ಇದು ತನ್ನ ಲಲಿತಗುಣದಿಂದ, ಅದೆಷ್ಟೋ `ಆಡದ ಮಾತು’ಗಳಿಂದ ಇಷ್ಟವಾಗಬಹುದು. ಅಂದಹಾಗೆ ಮುಂದೆ ಈ ಮಾಲಿಕೆಯಲ್ಲಿ ಹೀಗೇ ಕತೆ ಪ್ರಕಟಗೊಳ್ಳುತ್ತಾ ಹೋಗುತ್ತದೆಂಬುದನ್ನು ನಿರೀಕ್ಷಿಸಲಡ್ಡಿಯಿಲ್ಲ. ಈ ಕತೆಗೆ ನಿಮ್ಮ ಪ್ರತಿಕ್ರಿಯೆ ಸದಾ ಇರಲಿ. ಇನ್ನು ನೀವು ಮತ್ತು ನಮ್ಮೀ `ಗುರು’ಕತೆ.
ಒಂದು ಕ್ಷಣ ಬೆಚ್ಚಿ ಬಿದ್ದರು ಸುಭದ್ರಮ್ಮ!
ಅವರೆಂದೂ ತನ್ನ ಮಗನ ಬಾಯಲ್ಲಿ ಅಂಥ ಮಾತು ಕೇಳಿರಲಿಲ್ಲ ಅಥವಾ ಅವನು ಹಾಗೆ ಪ್ರತಿಕ್ರಿಯಿಸಬಹುದು ಎಂದು ಯೋಚಿಸಿರಲಿಲ್ಲ. ಮನೆ ಮುರಿಯುವ ಮಾತೋ ಆಸ್ತಿ ಮಾರುವ ಮಾತೋ ಆಗಿದ್ದರೆ… ಅವರು ಅರಗಿಸಿಕೊಳ್ಳುತ್ತಿದ್ದರೇನೋ? ಆದರೆ ವತ್ಸ ಆಡಿದ್ದು ಬೇರೆಯದೇ ಮಾತು. ಅಲ್ಲಿಂದ ಸುಭದ್ರಮ್ಮ ಮುಂಚಿನಂತಿರಲಿಲ್ಲ. ಅವರ ಜೀವನವೇ ಬದಲಾಗಿ ಹೋಯಿತು. ಅವರ ಯೋಚನೆಯೇ ಬೇರೆಯಾಯಿತು. ಯಾಕೋ ಶ್ರೀವತ್ಸ ಕ್ರಮೇಣ ಬದಲಾಗುತ್ತಿದ್ದಾನೆ ಎಂದನಿಸಿತು. ತಮ್ಮಿಂದ ಕೈ ಜಾರುತ್ತಿದ್ದಾನೆಂದು ಕೊರೆಯುತ್ತಿತ್ತು. ಅದೆಲ್ಲಾ ಇತ್ತೀಚಿನ ಮಾತು…
ಮುಂಚೆ ಶ್ರೀವತ್ಸ ಹಾಗಿರಲಿಲ್ಲ. ಒಂದು ಕಾಲಕ್ಕೆ ವತ್ಸ ತೀರಾ ಗಟ್ಟಿಗ. ವಾರಕ್ಕೊಂದಾವರ್ತಿಯಾದರೂ ಅವನು ಹೊಡೆದಾಡಿಕೊಂಡು ಮನೆಗೆ ಬರದೇ ಇರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಒಂದು ಸಬ್ಜೆಕ್ಟ್ನಲ್ಲಾದರೂ ಫೇಲ್ ಆಗದೇಯೇ ಇರುತ್ತಿರಲಿಲ್ಲ. ಯಾರೊಂದಿಗಾದರೂ ಜಗಳವಾಡುವುದಕ್ಕೆ, ಯಾರನ್ನಾದರೂ ಚಚ್ಚುವುದಕ್ಕೆ ಅವನಿಗೆ ನಿರ್ದಿಷ್ಟವಾದ ಕಾರಣಗಳೇ ಬೇಕಿರಲಿಲ್ಲ. ನಾಲ್ಕನೇ ವಯಸ್ಸಿನಲ್ಲಿ ಕೋತಿ ಮುಂಡೆ, ಕತ್ತೆ ಮುಂಡೆ ಎಂದು ಪ್ರಾರಂಭವಾದ ಅವನ `ಸಂಸ್ಕೃತ’ ವಿದ್ಯಾಭ್ಯಾಸ, ಹೈಸ್ಕೂಲು ತಲುಪುವುದರಲ್ಲೇ ಬೋಮಗ, ಸೂಮಗದವರೆಗೆ ಬಂದಿತ್ತು. ಇರುವೊಬ್ಬ ಸುಪುತ್ರನಿಗಾಗಿ ಸುಭದ್ರಮ್ಮ-ಮಾಧವರಾಯರು ಕೊರಗಿದ್ದೆಷ್ಟೋ, ಕಣ್ಣೀರು ಸುರುಸಿದ್ದೆಷ್ಟೋ, ಬೈಸಿಕೊಂಡಿದ್ದೆಷ್ಟೋ?
ಅವನ ವಯಸ್ಸಿಗೆ ಇದೆಲ್ಲಾ ಸಹಜ, ಮುಂದೆ ಸರಿಹೋಗುತ್ತಾನೆ ಎನ್ನುವ ಅಕ್ಕಪಕ್ಕದವರ ಮಾತುಗಳು ಒಂದಿಷ್ಟು ಧೈರ್ಯ ತಂದುಕೊಡುತ್ತಿತ್ತಾದರೂ ಸುಭದ್ರಮ್ಮನಿಗೆ ಏನೋ ಭಯ.ಯಾರೋ ಮುಂಜಿ ಮಾಡಿದರೆ, ಬಾಯಿಂದ ನಾಲ್ಕಾರು ಮಂತ್ರಗಳು ಉದುರಿದರೆ ಸರಿಹೋಗಬಹುದೆಂದರು. ಸರಿ, ಸುಭದ್ರಮ್ಮ ಮತ್ತು ಮಾಧವರಾಯರು ಬಂಧು ಬಳಗವನ್ನು ತಮ್ಮ ಏಕಮಾತ್ರ ಪುತ್ರನ ಮುಂಜಿಗೆ ಆಹ್ವಾನಿಸಿ ಅದ್ದೂರಿಯಾಗಿ ಸಮಾರಂಭ ನಡೆಸಿದರು. ಮುಂಜಿಯ ನಂಥರವಾದರೂ ಅವನು ಸರಿಹೋಗಬಹುದೆಂದು ಆಸೆಪಟ್ಟರು.
ವತ್ಸ ಅತ್ತ ಆಸ್ತಿಕನಲ್ಲದಿದ್ದರೂ ನಾಸ್ತಿಕನಲ್ಲದ ಹುಡುಗ. ದೇವರಿಗೆ ಬೇಸರವಾಗಬಾರದೆಂದು ಆಗಾಗ ಕೈ ಮುಗಿಯುತ್ತಿದ್ದನಾದರೂ ಜನಿವಾರ ಹಿಡಿದು
ಗಾಯತ್ರಿ ಮಂತ್ರ ಹೇಳುವ ಮನಸ್ಸು ಮಾಡಲಿಲ್ಲ. ಅವನು ಜನಿವಾರ ಉಪಯೋಗಿಸುತ್ತಿದ್ದುದು ಒಂದೇ ಕಾರಣಕ್ಕೆ. ಒಂದಕ್ಕೋ ಎರಡಕ್ಕೋ ಹೋದಾಗ ಅದು ಮೈಲಿಗೆಯಾಗಬಾರದೆಂದು ಕಿವಿಗೆ ಸುತ್ತುವುದಕ್ಕೆ. ಜನಿವಾರ ಮೈಲಿಗೆ ಮಾಡಿಕೊಂಡರೆ ಒಳ್ಳೆಯ ಹೆಂಡತಿ ಸಿಗುವ ಚಾನ್ಸು ಕಡಿಮೆ ಇದೆ ಎಂದು ಹಿರಿಯರೊಬ್ಬರು ಹೇಳಿದ್ದೇ ಇದಕ್ಕೆ ಮುಖ್ಯ ಕಾರಣ.
ಅನಂತರ ಸುಭದ್ರಮ್ಮನ ಕನಸು ನುಚ್ಚು ನೂರಾಗತೊಡಗಿತು. ಇನ್ನೊಂದು ಕಡೆ ವತ್ಸನ ಒರಟು ಸ್ವಭಾವದ ಉದಾಹರಣೆಗಳು ಕಾಲಕಾಲಕ್ಕೆ ಸಿಗುತ್ತಲೇ ಹೋದವು. ನಡುನಡುವೆಯೇ ವತ್ಸ ಕಷ್ಟಪಟ್ಟು ಕಾಲೇಜು ಮುಗಿಸಿ, ಒಂದು ಸಣ್ಣ ಕೆಲಸಕ್ಕೆ ಸೇರುವ ಹಂತಕ್ಕೆ ಬಂದ. ಅಲ್ಲಿಗೆ ಸುಭದ್ರಮ್ಮ ಸ್ವಲ್ಪ ನಿಟ್ಟುಸಿರು ಬಿಟ್ಟರು. ಇನ್ನಾದರೂ ಇವನಿಗೆ ಜವಾಬ್ದಾರಿ ಬರುತ್ತದೆ. ಎಲ್ಲಾ ಸರಿ ಹೋಗುತ್ತದೆ ಎಂದುಕೊಂಡರು. ಆದಷ್ಟು ಬೇಗ ಅವನಿಗೊಂದು ಮದುವೆ ಮಾಡಿಬಿಟ್ಟರಂತೂ ಅವನು ಬದಲಾದಂತೆಯೇ ಎಂದು ತೀರ್ಮಾನಿಸಿದರು. ಆ ನಿರ್ಧಾರ ಗಟ್ಟಿಗೊಳ್ಳುವ ಒಂದು ವಾರದಲ್ಲೇ ವತ್ಸ ಕೆಲಸ ಬಿಟ್ಟು ಬಂದಿದ್ದ.
ಅದರ ನಂತರ ಸುಮಾರು ಆರು ತಿಂಗಳುಗಳ ಕಾಲ ಕೆಲಸವಿಲ್ಲದೇ ಅಂಡಲೆಯುತ್ತಿದ್ದರೂ ಸುಭದ್ರಮ್ಮ ತಮ್ಮ ಮಗನಲ್ಲಿ ಇತ್ತೀಚೆಗೆ ವಿಚಿತ್ರವಾದ ಬೆಳವಣಿಗೆಯನ್ನು ಕಂಡರು. ಅವನು ಇತ್ತೀಚೆಗೆ ಒಂದೇ ಒಂದು ಗಲಾಟೆಯನ್ನೂ ಮಾಡಿಕೊಂಡಿಲ್ಲ ಎಂಬುದನ್ನು ಮನಗಂಡರು. ಅವನ ವರ್ತನೆ ಸಹ ಬದಲಾದಂತಿತ್ತು. ಇತ್ತೀಚೆಗೆ ಎಂದರೆ ಒಂದು ತಿಂಗಳಿನಿಂದೀಚೆ ಅವನು ದನಿ ಏರಿಸಿ ಮಾತಾಡಿದ್ದಿಲ್ಲ, ಎದುರುತ್ತರ ಕೊಟ್ಟಿದ್ದೇ ಇಲ್ಲ. ತಮ್ಮ ಮಗನಲ್ಲಿ ಏನೋ ಬದಲಾವಣೆಯಾಗುತ್ತಿದೆ ಎನ್ನುವಷ್ಟರಲ್ಲಿ ಈ ಘಟನೆ ನಡೆದುಹೋಯಿತು. ಅವತ್ತು ಎಂದಿನಂತೆ ಸುಭದ್ರಮ್ಮ `ಮನೆಯೊಂದು ಮೂರು ಬಾಗಿಲು, ನಾಲ್ಕು ರಂಧ್ರಗಳು, ಐದು ಕಿಟಕಿಗಳು’ ಧಾರಾವಾಹಿಯನ್ನು ನೊಡುತ್ತಿದ್ದರು. ಮಗನ ಏನೇ ಉಪಟಳವಿದ್ದರೂ ಕಳೆದ ಏಳು ವರ್ಷಗಳಿಂದ ಅವರೆಂದೂ ಆದನ್ನು ಮಿಸ್ ಮಾಡಿಕೊಂಡಿರಲಿಲ್ಲ. ಸಂಜೆ ಆರಕ್ಕೆ ಎಲ್ಲಿದ್ದರೂ ಅಲ್ಲಿಂದ ತಪ್ಪಿಸಿಕೊಂಡು ಬಂದು ಟೀವಿ ಮುಂದೆ ಕೂರಬೇಕು. ಅವತ್ತೂ ಅದನ್ನೇ ಮಾಡಿದರು. ಸುಭದ್ರಮ್ಮ ಧಾರಾವಾಹಿಯಲ್ಲಿ ತಲ್ಲೀನರಾಗಿರುವಾಗಲೇ ಮಗ ವತ್ಸ ಬಂದ. ಪೇಪರ್ ಮೇಲೆ ಕಣ್ಣಾಡಿಸುತ್ತಾ, ಆಗಾಗ ಟೀವಿ ನೋಡುತ್ತಾ ಕುಳಿತಿದ್ದ. ಸುಭದ್ರಮ್ಮ ಟೀವಿ ನೋಡುತ್ತಾ ಏನೇನೋ ಲೊಚಗುಟ್ಟುತ್ತಿದ್ದರು. ಧಾರಾವಾಹಿಯಲ್ಲಿ ರಮೇಶ್ ತನ್ನತ್ತೆ ಹಾಗೂ ಹೆಂಡತಿಯ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಕಣ್ಣೀರು ಸುರಿಸುತ್ತಿದ್ದರು. ಅವರಿಬ್ಬರಿಗೆ ಕುಮ್ಮಕ್ಕು ನೀಡುತ್ತಿದ್ದ ಸದಾನಂದ ರಾಯರನ್ನು ಸುಭದ್ರಮ್ಮ ಶಪಿಸುತ್ತಿದ್ದರು. ಮಾತಿನ ಮಧ್ಯೆ `ನೀಚ ನೀಚ’ ಎಂದು ಎರಡು ಬಾರಿ ಬೈದರು.
ಅನಾಹುತ ಆಗಿದ್ದೇ ಅಲ್ಲಿ. ಅಲ್ಲಿಯವರೆಗೂ ಪೇಪರ್ ಓದುತ್ತಿದ್ದ ವತ್ಸ ಮೆತ್ತಗೆ ತಲೆಯೆತ್ತಿ ನೋಡಿದ, ಬಹಳ ನಿರ್ಲಿಪ್ತವಾಗಿ `ಅವನೊಬ್ಬನೇ ಅಲ್ಲ, ನಾವೆಲ್ಲರೂ ನೀಚರು. ಆದರೆ ಆ ನೀಚತನದ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆ ಆಗಿರುತ್ತದೆ. ಕೆಲವರು ಕೆಟ್ಟ ನೀಚರು, ಇನ್ನೂ ಕೆಲವರು ಒಳ್ಳೆಯ ನೀಚರು. ನೀಚರಲ್ಲದವರು ಸಿಗೋದೇ ಕಷ್ಟ ಎನ್ನುತ್ತಾರೆ ನಮ್ಮ ಗುರುಗಳು…’ ಎಂದ. ಈ ಮಾತು ಕೇಳಿ ಗಾಬರಿ ಬಿದ್ದುಹೊದರು ಸುಭದ್ರಮ್ಮ. ತಮ್ಮ ಮಗನ ಬಾಯಲ್ಲಿ ಇಂಥಾ ಮಾತೆ? ಅದೆಲ್ಲಾ ಸರಿ ಈ ಗುರುಗಳು ಯಾರು?… ಈ ಹುಳ ಅವರ ಮೆದುಳನ್ನು ಯಾವ ರೀತಿ ತಿಂದಿತೆಂದರೆ ಬರೀ ಮಾತಲ್ಲಿ ಹೇಳುವುದು ಕಷ್ಟ.
ಮೊದಲೇ ಹೇಳಿದಂತೆ ಸುಭದ್ರಮ್ಮ ಅನಂತರ ಮುಂಚಿನಂತೆ ಇರಲಿಲ್ಲ. ಈ ಘಟನೆಯಿಂದ ಅವರ ಜೀವನವೇ ಬದಲಾಗಿ ಹೋಯಿತು. ಯೋಚನೆಯೇ ಬೇರೆಯಾಯಿತು. ಯಾಕೋ ವತ್ಸ ಕ್ರಮೇಣ ಬದಲಾಗುತ್ತಿದ್ದಾನೆ ಎಂದೆನಿಸಿತು. ವತ್ಸ ಅವರ ಬೇಜಾರಿಗೆ ತಕ್ಕಂತೆ ಆಡುತ್ತಿದ್ದ. ಮಾತು ಕಡಿಮೆ ಮಾಡಿದ. ಜಗಳ ಕಂಪ್ಲೇಂಟುಗಳಂತೂ ಇಲ್ಲವೇ ಇಲ್ಲ. ಅವನು ಹಿಂದೊಮ್ಮೆ ಗಲಾಟೆ ಮಾಡಿ, ಹೊಡೆದು ಬರುತ್ತಿದ್ದ ಎಂದರೆ ಯಾರೂ ನಂಬದಂತಾಯಿತು. ಅವನ ರೀತಿ ನೀತಿಯೇ ಬದಲಾಯಿತು. ಆಗಾಗ ಅಧ್ಯಾತ್ಮದ, ಅಲೌಕಿಕದ ಮಾತಾಡುತ್ತಿದ್ದ. ಗುರುಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ.
ಈ ಗುರು ಯಾರು? ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಇದರಿಂದ ಎಷ್ಟೋ ರಾತ್ರಿ ಅವರಿಗೆ ನಿದ್ದೆ ಬರಲಿಲ್ಲ. ಹರೇ ರಾಮ ಹರೇ ಕೃಷ್ಣ ಎನ್ನುತ್ತಾ ಸಂಸಾರ ಬಿಟ್ಟು ಹೋಗಿಬಿಡುವವರ ಕತೆ ಕೇಳಿ ಆತಂಕಗೊಂಡಿದ್ದ ಅವರು, ಮಗ ಎಲ್ಲಿ ಆ ದಾರಿ ಹಿಡಿದನೋ ಎಂಬ ಭಯದಿಂದ ಆಗಾಗ ಬಾಯಿ ಬಿಡಿಸುವ ಪ್ರಯತ್ನ ಮಾಡಿದರು. ಊಟಕ್ಕೆ ಕೂತಾಗ, ಪೇಪರ್ ಓದುವಾಗ, ಧಾರಾವಾಹಿ ನೋಡುವಾಗ, ಏನನ್ನೂ ಮಾಡದಿದ್ದಾಗ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಈ ಪ್ರಶ್ನೆಯನ್ನು ಮತ್ತಷ್ಟು ಕಗ್ಗಂಟು ಮಾಡುತ್ತಿದ್ದ ವತ್ಸ.
ನಿಮ್ಮ ಗುರುಗಳು ಯಾವ ದೇವಸ್ಥಾನದಲ್ಲಿದ್ದಾರೆ?
`ಗುರುಗಳು ಇರುವುದಕ್ಕೆ ದೇವಸ್ಥಾನ ಬೇರೆ ಬೇಕಾ? ಅವರೆಲ್ಲಾ ಕಡೆ ಇರುತ್ತಾರೆ ಬಿಡು’.
ನಿನ್ನ ಗುರುಗಳು ಗಂಡಸಾ, ಹೆಂಗಸಾ?
`ಯಾರಾದರೆ ಏನು? ಗುರು ಮುಖ್ಯವಲ್ಲ, ಗುರುವಿನ ಬೋಧನೆ ಮುಖ್ಯ. ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ’.
ನಿಮ್ಮ ಗುರುಗಳು ಹೇಗಿದ್ದಾರೆ?
`ಅವರನ್ನು ಇಂಥ ರೂಪದಲ್ಲಿ ಗುರುತಿಸುವುದು ಕಷ್ಟ. ಅವರನ್ನು ಕಣ್ಣುಗಳಲ್ಲಿ ಕಾಣುವುದಕ್ಕಿಂತ ಒಳಗಣ್ಣಿನಿಂದ ನೋಡಬೇಕು. ಆಗಷ್ಟೇ ಅವರು ಕಾಣುತ್ತಾರೆ. ಅವರು ನಿರ್ವಿಕಾರರು’.
ಅವರ ಹೆಸರೇನು?
`ಅವರಿಗೆ ಹೆಸರೊಂದು ಬೇರೆ. ಯಾವಹೆಸರು ಬೇಕಾದರೂ ಕರಿ. ಇಷ್ಟವಿದ್ದರೆ ಅವರೇ ಉತ್ತರಿಸುತ್ತಾರೆ…’
…ಇದೆಲ್ಲಾ ಕೇಳಿ ಸುಭದ್ರಮ್ಮನಿಗೆ ತಲೆ ಚಿಟ್ಟು ಹಿಡಿಯುತ್ತಿತ್ತು. ಕೆಲವೊಮ್ಮೆಯಂತೂ ವತ್ಸ ಇನ್ನೂ ವಿಚಿತ್ರವಾಗಿ ಮಾತನಾಡುತ್ತಿದ್ದ. ಗುರುಗಳೇ ಸುಳ್ಳೆಂದು ಹೇಳುತ್ತಿದ್ದ. ಗುರುಗಿಂತ ಗುರಿ ಮುಖ್ಯ ಎನ್ನುತ್ತಿದ್ದ. ಗುರುವನ್ನು ನಂಬಿದರೆ ಗುರಿ ಕಾಣುವುದಿಲ್ಲ ಎನ್ನುತ್ತಿದ್ದ. ಆ ಗುರಿಯನ್ನು ಗುರು ಅಳಿಸಿಹಾಕಿಬಿಡುತ್ತಾನೆ ಎನ್ನುತ್ತಿದ್ದ. ಅದರ ಹಿಂದೆಯೇ ನಮ್ಮ ಗುರುಗಳು ಹೇಳುತ್ತಾರೆ… ಎಂದು ಏನೋ ಹೊಸ ವಿಚಾರ ಬಿಚ್ಚುತ್ತಿದ್ದ.
ಈ ನಡುವೆ ಅವನ ಕೋಣೆಯನ್ನೊಮ್ಮೆ ಹೊಕ್ಕು ಅಲ್ಲಿ ಏನಾದರೂ ಫೋಟೋ, ಯಾವುದಾದರೂ ಗುರುವಿನ ಪುಸ್ತಕ ಸಿಗುತ್ತದಾ ಎಂದು ಎಡತಾಕಿದರು. ಅವನ ಸ್ನೆಹಿತರಲ್ಲಿ ಅವನ ಬಗ್ಗೆ ವಿಚಾರಿಸಿ ನೋಡಿದರು. ಯಾವ ಆಧ್ಯಾತ್ಮಿಕ ಗುರುವಿನ ಜೊತೆ ಅವನು ಹೇಳುವ ವಿಚಾರಧಾರೆ ತಾಳೆಯಾಗುತ್ತದೆ ಎಂದು ನೋಡಿದರು… ಸುಭದ್ರಮ್ಮನಿಗೆ ಎಲ್ಲಾ ವಿಚಾರದಲ್ಲೂ ನಿರಾಶೆಯೇ. ಮಗನ ಬಗ್ಗೆ ಯಾವಾಗಲೋ ನಂಬಿಕೆ ಕಳೆದುಕೊಮಡಿದ್ದ ಮಾಧವರಾಯರು, ಈಗಂತೂ ಅವನ ಬಗ್ಗೆ ಪೂರ್ಣ ಆಸೆ ಬಿಟ್ಟರು. ಅವನು ಇನ್ನು ಸರಿಹೋಗುವುದಿಲ್ಲ ಎಂದು ಅವರು ಅಷ್ಟರಲ್ಲಾಗಲೇ ತೀರ್ಮಾನಿಸಿಯಾಗಿತ್ತು.
ಈ ನಡುವೆ ವತ್ಸವಿಗೊಂದು ಇಂಟರ್ವ್ಯೂಗೆ ಕರೆ ಬಂತು. ವತ್ಸನಿಗಿಂತ ಹೆಚ್ಚಾಗಿ ಸುಭದ್ರಮ್ಮನಿಗೆ ಖುಷಿಯಾಯಿತು. ಇದರಲ್ಲಿ ಗೆದ್ದು, ಅವನಿಗೊಂದು ಕೆಲಸ ಅಂತಾದರೆ ಒಂದು ವಾರ ಕಾಲ ಬೆಣ್ಣೆ ಗೋವಿಂದನ ಎದುರು ತುಪ್ಪದ ದೀಪ ಹಚ್ಚುವುದಾಗಿ ಆಶ್ವಾಸನೆ ನೀಡಿದರು. ಮಗನನ್ನು ಕಳಿಸುವ ಮುನ್ನ `ವತ್ಸಾ ಈ ಸಾರಿ ಬೇಸರಮಾಡಬೇಡವೋ’ ಎಂದು ದೈನೇಸಿಯಾಗಿ ಕೇಳಿಕೊಂಡರು. ಅದಕ್ಕೆ ವತ್ಸ ಹೇಳಿದ್ದೇನು ಗೊತ್ತಾ? `ಬೇಸರ ಮಾಡಲು ನಾನ್ಯಾರಮ್ಮಾ ಅಥವಾ ಬೇಸರ ಮಾಡಿಕೊಳ್ಳಲು ನೀನ್ಯಾರಮ್ಮಾ. ನಾನು ಈ ಕೆಲಸ ಒಪ್ಪಿಕೊಳ್ಳಬೇಕು ಎನ್ನುವುದಕ್ಕಿಂತ ಅದಕ್ಕೆ ದೈವಪ್ರೇರಣೆಯಾಗಬೇಕು. ಹಾಗಂತ ನಮ್ಮ ಗುರುಗಳು ಹೇಳುತ್ತಿರುತ್ತಾರೆ’.
ಸುಭದ್ರಮ್ಮ ಇನ್ನೊಂದು ಮಾತು ಆಡಲಿಲ್ಲ.
ಅವತ್ತು ದಿನ ಪೂರಾ ಸುಭದ್ರಮ್ಮ ಒಂದು ನಿಮಿಷ ಚಡಪಡಿಸದೇ ಇರಲಿಲ್ಲ. ಕೊರಗುತ್ತಲೇ ದಿನ ಕಳೆದರು. ಮಗನಿಗೆ ಹಿಡಿದಿರುವ ಹುಚ್ಚು ಬಿಟ್ಟುಹೋಗಲಿ ಎಂದು ಬೇಡಿಕೊಳ್ಳುತ್ತಿದ್ದರು. ಅವನಿಗೆ ಆದಷ್ಟು ಬೇಗ ಕೆಲಸವೊಂದಾಗಿ, ಜವಾಬ್ದಾರಿ ಬರುವಂತಾಗಲಿ ಎಂದು ಕಂಡಕಂಡ ದೇವರಲ್ಲೆಲ್ಲಾ ಕೇಳಿಕೊಂಡರು. ಹಾಗೆ ಕೇಲಿಕೊಳ್ಳುತ್ತಾ ದಿನ ಮುಗಿದದ್ದು, ರಾತ್ರಿ ಪ್ರಾರಂಭವಾಗಿದ್ದು, ಹೊರಗೆ ಧಾರಾಕಾರ ಮಳೆ ಬಂಯಾವುದೂ ಗೊತ್ತಾಗಲಿಲ್ಲ. ರಾತ್ರಿ ಹೊಟ್ಟೆ ಚುರ್ರುಗುಟ್ಟಿದಾಗಲೇ ಅವರಿಗೆ ತಮ್ಮ ಮಗ ಇನ್ನೂ ಬಂದಿಲ್ಲ ಎಂದು ಗೊತ್ತಾಗಿದ್ದು. ಫೋನ್ ಮಾಡಿದರೆ ಏನೂ ಸದ್ದಿಲ್ಲ. ನೋಡಿಕೊಂಡು ಬರುವುದಕ್ಕೆ ಗಂಡನನ್ನು ಕಳಿಸೋಣವೆಂದರೆ ಧಾರಾಕಾರ ಮಳೆ. ಸರಿ, ಅವನೇ ಬರಬಹುದೆಂದು ಕಾದಿದ್ದೇ ಬಂತು. ಬೆಳಿಗ್ಗೆಯಾದರೂ ಸುದ್ದಿಯಿಲ್ಲ. ಮಧ್ಯಾನವಾದರೂ ಖಬರಿಲ್ಲ. ಸಂಜೆ ಹೊತ್ತಿಗೆ ವೈಯಾಲಿಕಾವಲ್ ಪೊಲೀಸ್ ಟಾಣೆಗೂ ಹೋಗಿ ಬಂದದ್ದಾಯಿತು.
ರಾತ್ರಿಯಾಗಿ ಮತ್ತೊಂದು ಬೆಳಕು ಹರಿದರೂ ವತ್ಸನ ಸುದ್ದಿಯಿಲ್ಲ. ಅವನ ಇತ್ತೀಚಿನ ಚಾಳಿಯನ್ನು ಸುಭದ್ರಮ್ಮನಿಂದ ಕೇಳಿ ತಿಳಿದಿದ್ದ ನೆಂಟರಿಷ್ಟರು, ಅಕ್ಕ-ಪಕ್ಕದವರು ಬಹುಶಃ ಯಾವುದಾದರೂ ಗುರುಗಳ ಸಂಸರ್ಗ ಹೊಂದಿ, ಮುಕ್ತಿ ಪಡೆಯಲಿಕ್ಕೆ ಯಾವುದಾದರೂ ಮಠ ಸೇರಿರಬಹುದು ಎಂದು ತೀರ್ಮಾನಿಸಿದರು. ಎಲ್ಲರೂ ಒಂದೊಂದು ಕಡೆ ಹೋಗಿ ಹುಡುಕುವುದಕ್ಕೆ ಪ್ಯಾಂಟ್, ಚಪ್ಪಲಿ ತೊಟ್ಟರು. ಎಲ್ಲೇ ಇದ್ದರೂ ಅವನನ್ನು ವಾಪಾಸು ಕರೆದುಕೊಂಡು ಬರಲೇಬೇಕೆಂದು ತೀರ್ಮಾನಿಸಿ ಎದ್ದರು. ಇನ್ನೂ ಕೆಲವರು ಪತ್ರಿಕೆಗಳನ್ನು ತೆರೆದು ಎಲ್ಲಾದರೂ ಪ್ರವಚನ, ಉಪನ್ಯಾಸಗಳಿವೆಯಾ, ಅಲ್ಲೇನಾದರೂ ವತ್ಸ ಸಿಗಬಹುದಾ ಎಂದು ಚರ್ಚೆ ಮಾಡಿ ಹೊರಟರು. ಹೋದವರು ವಾಪಾಸು ಬಂದರು. ತಮ್ಮ ಮಗ ಅವರ ಜೊತೆ ಬರಬಹುದು ಎಂಬ ಸುಭದ್ರಮ್ಮನ ನಂಬಿಕೆ ಮಾತ್ರ ಹುಸಿಯಾಯಿತು.
ಇದಾಗಿ ಮೂರು ವರ್ಷಗಲಾಗಿವೆ. ಈಗ `ಮನೆಯೊಂದು ಮೂರು ಬಾಗಿಲು, ನಾಲ್ಕು ರಂಧ್ರಗಳು, ಐದು ಕಿಟಕಿಗಳು…’ ಧಾರಾವಾಹಿ ಸುಭದ್ರ್ಮನೆಂಬ ಅಭಿಮಾನಿನಿಯನ್ನು ಕಳೆದುಕೊಂಡಿದೆ. ಅವರೀಗ ಆರು ಗಂಟೆಯ ಧಾರಾವಾಹಿ ನೋಡುವುದಿಲ್ಲ. ಆ ಸಮಯಕ್ಕೆ ಅವರು ಪ್ರತಿ ದಿನ ಒಂದೊಂದು ಮಠದಲ್ಲೋ, ಪ್ರವಚನ ಮಂದಿರದಲ್ಲೋ ಕಾಣಿಸಿಕೊಳ್ಳುತ್ತಾರಂತೆ. ಅವರಿಗೆ ಯಾವ ಗುರು- ಶಿಷ್ಯರೂ ಕಣ್ಣಿಗೆ ಬೀಳಬಾರದು. ಬಿದ್ದರೆ ವಿಚಾರಣೆ ಕಾದಿದೆ.
5 Comments
November 20, 2008 at 10:24 am
ಕತೆ ತುಂಬಾ ಚೆನ್ನಾಗಿದೆ. ಎಲ್ಲೂ ನಿಲ್ಲಿಸದೇ ಒಂದೇ ಬಾರಿಗೆ ಓದಿಸಿಕೊಂಡು ಹೋಗುತ್ತದೆ. ಹಾಗೆ ಮಧ್ಯೆ ಮಧ್ಯೆ ನಗಿಸುತ್ತದೆ, ಅಷ್ಟೇ ಚೆನ್ನಾಗಿ. ಎಲ್ಲಿಟ್ಟಿದ್ದೆ ಚೇತನ್ ಇಂಥಾ ಕತೆನಾ, ಇದುವರೆಗೆ? ಸೋಮಾರಿ ನೀನು, ಸೋಮಾರಿತನ ಬಿಟ್ಟು ಇನ್ನೊಂದಷ್ಟು ಒಳ್ಳೆ ಕತೆಗಳನ್ನು ಬರೆ. ಇದಕ್ಕೇನಾದರೂ ನಿನಗೆ ದಕ್ಷಿಣೆ ಕೋಡಬೇಕಾ?
-ರಾಜಶೇಖರ ಮೂರ್ತಿ
November 20, 2008 at 12:20 pm
ಕತೆಯ ನಿರೂಪಣೆ, ಶೈಲಿ ಕೊನೆಯವರೆಗೂ ಹಿಡಿದಿಟ್ಟಿತು.ಸುಂದಮ್ಮನ ಧಾರಾವಾಹಿ ಖಯಾಲಿ, ಅದಕ್ಕೆ ಸಂಬಂಧಿಸಿದ ವಿವರಗಳು….ಹ್ಹಹ್ಹಾ…ಹ್ಹ…ಹ್ಹ.. ಇನ್ನು ಮುಂದಾದರೂ ಕಳ್ಳ-ಕುಳ್ಳದಲ್ಲಿ ಆಗಾಗ ಕಾಣಿಸಿಕೊಳ್ಳುತ್ತೀರಿ ಅನ್ನೋದು ಆಸೆ. ನಿರಾಸೆ ಮಾಡೋದಿಲ್ಲ ಅನ್ನೋದು ಭರವಸೆ. ಅದಕ್ಕೆ ಸುನಂದಮ್ಮ, ಶ್ರೀವತ್ಸ ನಾಂದಿಯಾಗಲಿ.
November 20, 2008 at 3:21 pm
ಚೇತನ್,
ಧಾರಾವಾಹಿಯ ಶೀರ್ಷಿಕೆಯನ್ನ ಮಾರ್ಪಡಿಸಿದ್ದು ನೋಡಿ ಆ ಧಾರಾವಾಹಿಯ ಭಕ್ತೆಯಾದ ಅಮ್ಮನಿಗೆ ಹೇಳಿದೆ. ತುಂಬ ಹೊತ್ತು ನಗಾಡಿದರು. ನಿಮ್ಮ ಮೊದಲನೆ ಕಥಾಸಾಹಸಕ್ಕೆ ಶುಭಾಶಯಗಳು. ಕಥೆಯ ಕೊನೆಯಲ್ಲಿ ಇನ್ನೂ ಏನೋ ಮಿಸಿಂಗ್ ಅನ್ನಿಸ್ತು. ಕೆಲವು ಟೈಪಾಗ್ರಫಿಕಲ್ ಮಿಸ್ಟೇಕುಗಳಿವೆ. ಏನೆ ಇರಲಿ..ಮುಂದಿನ ಕಥೆಗಾಗಿ ಕಾಯುವೆ. ಬೆಸ್ಟ್ ಆಫ್ ಲಕ್!!
November 28, 2008 at 11:58 pm
ಅರೆ !! ಚೇತನ್ ಮತ್ತಷ್ಟು ಬರಿಯಪ್ಪ….
February 6, 2009 at 3:23 pm
ಚೇತನ್, ನಿನ್ನ ಬರವಣಿಗೆ ತುಂಬಾ ತಮಾಷಿಯಾಗಿದೆ.. keep it up!