restart6

 

ಕಾಸಿಗೆ ಬಂದ ರಿಸೆಷನ್ ಕೆಲವು ಕಾಲ ನಮ್ಮ ಬ್ಲಾಗಿನ ಅಕ್ಷರಕ್ಕೂ ಬಂದಿತ್ತು. ಕಳೆದ ಎರಡೂವರೆ ತಿಂಗಳಿಂದ  ಕೆಲಸದ ಒತ್ತಡ, ತಿರುಗಾಟ ಮೊದಲಾದ ಕಾರಣಕ್ಕೆ ಮುಚ್ಚಿದ್ದ `ಕಳ್ಳಕುಳ್ಳ’ರ ಬ್ಲಾಗಂಗಡಿಯ ಶೆಟ್ಟರ್ ಮತ್ತೆ ಕರಗುಟ್ಟುತ್ತಾ ತೆರೆದುಕೊಳ್ಳುತ್ತಿದೆ. ಒಳಗೆ ಧೂಳಿದ್ದರೆ ಬೈಬಾರದು. ಈ ಎರಡು ತಿಂಗಳಲ್ಲಿ ಸಣ್ಣ ಸಣ್ಣ, ಆದರೆ ಸಾಂಸ್ಕ್ರತಿಕವಾಗಿ ಮುಖ್ಯವೆನ್ನುವಂಥ ಘಟನೆಗಳು ನಡೆದಿವೆ. ಅದನ್ನೆಲ್ಲಾ ಇಲ್ಲಿ ಮಾತಾಡೋಣ.

Let’s restart with hopes…

singingಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ’ ಎಂದು ಒಂದು ಸಂಕಲನವನ್ನು ಹೊರತಂದು, ಬರೀ ಸೂರ್ಯನ ಮೇಲೆ ಒಂದು ಸಂಕಲನವಿಡೀ ಕವಿತೆಗಳನ್ನು ಬರೆದುಕೊಟ್ಟಿದ್ದರು. `ಸೂರ್ಯ, ಇನ್ನೊಂದು ಲೋಕದ ಕಿಂಡಿ’, `ಸೂರ್ಯ- ಇಡೀ ಲೋಕದ ಕಸವನ್ನು ಕಿರಣಗಳ ಕಸಬರಿಕೆಯಿಂದ ಗುಡಿಸುವ ಜಾಡಮಾಲಿ’ ಎಂಬಂಥ ಹೊಳಹುಗಳಿದ್ದ ಸಂಕಲನ ಅದು.
ಆದರೆ ಶಾ ಬಾಲುರಾವ್‌ ಅವರು ಬಹಳ ಚೆಲುವಾದ ಕವಿತೆಗಳನ್ನು ಬಹಳ ಹಿಂದೆ ಪ್ರಕಟಿಸಿದ್ದರು. `ನಡೆದದ್ದೇ ದಾರಿ’ ಎನ್ನುವುದು ಆ ಸಂಕಲನದ ಹೆಸರು. ಒಟ್ಟು ನಲವತ್ತೆಂಟು ಕವಿತೆಗಳಿವೆ ಅದರಲ್ಲಿ. 1998ರಲ್ಲಿ `ಅಕ್ಷರ ಪ್ರಕಾಶನ’ ಪ್ರಕಟಿಸಿದ ಆ ಸಂಕಲನದ ಕವಿಯ ಮಾತು ಈಗಿನ ಕಾವ್ಯ ಜಗತ್ತಿಗೂ ಒಂದು ದಾರಿದೀಪದಂತೆ ಕಾಣಬಹುದು. ಅವರು ಬರೆಯುವ ಕಾಲಕ್ಕೆ ಕಾವ್ಯ ಹೇಗಿತ್ತು ಎಂದು ಅವರು ಹೇಳಿಕೊಂಡಿದ್ದಾರಾದರೂ ಅದರಲ್ಲಿ ನಮ್ಮ ಕಾಲದ ಕಾವ್ಯಭೂಮಿಯ ಸ್ಥಿತಿಗತಿಯನ್ನೂ ಹೇಳುತ್ತಿದೆಯೇನೋ- ಅನಿಸುತ್ತದೆ. ಆ ಮಾತಿನ ಕೆಲವು ಭಾಗಗಳು, ಅವರ ಮಾತಿನಂತೆ ನಡೆದುಕೊಂಡಿರುವ ಒಂದಿಷ್ಟು ಕವಿತೆಗಳು ಇಲ್ಲಿವೆ. ನಿಮ್ಮ ಓದಿಗಾಗಿ. ದಯವಿಟ್ಟು ಕೊಂಡು ಓದಿ ಸಂಕಲನವನ್ನು. ಬೆಲೆ 50 ರೂಪಾಯಿಗಳು.

ಮುಮ್ಮಾತು
ನನಗೆ ತಮಾಷೆಯೆನಿಸುವ ನನ್ನ ಬದುಕಿನ ಹಲವಾರು ವ್ಯಂಗ್ಯಗಳಲ್ಲಿ ಒಂದೆಂದರೆ 1947-51ರ ಕಾಲೇಜು ದಿನಗಳಿಂದ ಹಿಡಿದು ಇವತ್ತಿನ ತನಕ ಕವಿತೆಯ ಹೆಸರಲ್ಲಿ ನನಗೆ ತೋಚಿದ್ದನ್ನು ತೋಚಿದಂತೆ ಗೀಚುತ್ತಾ ಬಂದಿದ್ದು, ಅವುಗಳಲ್ಲಿ ಅನೇಕವು ಆಗಿಂದಾಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು, ನನ್ನ ಅಂತರಂಗದ ತಜ್ಞ ಮಿತ್ರರಿಗೆ ಒಪ್ಪಿಗೆಯಾಗಿದ್ದರೂ ನನ್ನ ಸರಿಯಾದ ಕವಿತಾ ಸಂಗ್ರಹವೊಂದು ಇದುವರೆಗೂ ಬಂದಿಲ್ಲ….ಇದಕ್ಕೆ ಮುಖ್ಯ ಕಾರಣವೆಂದರೆ ನನ್ನ ಸೋಮಾರಿತನದ ಜೊತೆಗೆ ನನ್ನ ರಚನೆಯ ಬಗ್ಗೆ ನನ್ನೊಳಗಿನ ತೃಪ್ತಿ- ಅತೃಪ್ತಿಗಳ ಹೊಯ್ದಾಟ, ಗೊಂದಲ.
ಈಚೆಗೊಂದು ದಿನ ಇಲ್ಲಿ ಬಂದಿದ್ದ ನನ್ನ ತರುಣ ಕವಿಮಿತ್ರ ಜಯಂತ ಕಾಯ್ಕಿಣಿ, ಅದೇ ಆಗ ಪ್ರಕಟವಾಗಿದ್ದ ನನ್ನ ಒಂದೆರಡು ಕವಿತೆಯನ್ನು ಓದಿ ಮೆಚ್ಚಿದ್ದವನು `ಕಾಕಾ, ನಿಮ್ಮ ಕವಿತೆಗಳನ್ನೆಲ್ಲಾ ನೋಡಬೇಕಾಗಿದೆ, ತೆಗೆಯಿರಿ’ ಎಂದು ಹಠ ಹಿಡಿದ ಫಲವಾಗಿ ಕಪಾಟಿನ ಹಳೆಯ ಕಡತಗಳಲ್ಲಿ ಅಡಗಿದ್ದ ನೂರಕ್ಕೂ ಹೆಚ್ಚು ಕವಿತೆಗಳು ಹೊರಬಂದವು. ಅದರಲ್ಲಿ ನಲವತ್ತೆಂಟನ್ನು ಆರಿಸಿ ಈ ಸಂಗ್ರಹಕ್ಕೆ ಕೊಟ್ಟಿದೆ. ಈ ಆಯ್ಕೆಯಲ್ಲಿ ಸಮಪಾಲು ಕೀರ್ತಿ ಜಯಂತನಿಗೆ ಸಲ್ಲುತ್ತದೆ. Read the rest of this entry »

madwa_011108_euegen-2We are continuously opening the doors with happiness and closing them with despair.
-ಹಾಗೆಂದು ಸಿ ಡಿ ಮೋರ್ಲೆ ಎಂಬ ಲೇಖಕ `ಡೋರ್‌’ ಎಂಬ ಲೇಖನದಲ್ಲಿ ಬಾಗಿಲನ್ನು ಬಹಳ ಅದ್ಭುತವಾಗಿ ತೆರೆದು ತೋರಿಸುತ್ತಾ ಹೋಗುತ್ತಾನೆ. ಬಾಗಿಲಿನ ಹಿಂದೆ ಏನೆಲ್ಲಾ ಇರಬಹುದು. ಬಾಗಿಲು ನಮ್ಮೆಲ್ಲಾ ರಹಸ್ಯಕ್ಕೂ ಊಹೋಪೋಹಕ್ಕೂ, ಅರ್ಧ ಸತ್ಯಕ್ಕೂ ಒಳ್ಳೆಯ ಉದಾಹರಣೆ.
ಹಿಂದೊಮ್ಮೆ ಆ ಲೇಖನದಿಂದ ತುಂಬ ಪ್ರೇರಣೆ ಹೊಂದಿ ಕಾಲೇಜು ಓದುವ ಹೊತ್ತಿಗೆ ಬರೆದ ಕವಿತೆ `ಬಾಗಿಲು’. ಸ್ವಲ್ಪ ದೀರ್ಘವಾಯಿತು ಎಂದು ನೀವು ಬೇಕಾದರೆ ಬೈಯಬಹುದು. ಮುಚ್ಚಿದ ಬಾಗಿಲು ನಮಗೆಲ್ಲಾ ನೀಡಿದ ವಿಸ್ಮಯಕ್ಕಾಗಿ ನಮಿಸುತ್ತಾ ಇಲ್ಲಿ ಆ ಕವಿತೆ ಹಾಜರಾಗುತ್ತಿದೆ.

1
ಸುಟ್ಟಿಟ್ಟಿಗೆಗೆ ಮೆದು ಮಣ್ಣು ಮೆತ್ತಿ,
ಪಂಚಾಂಗದ ಇಂಚಿಂಚೂ ನೀರೆರಚಿದಾಗ
ಸೂರಿನ ಹನಿಸುಗಳ ತಡೆಗೆ
ಪರದೆ ಕಣ್ಣ ಗೋಡೆ:
ಹೊಸಮಣ್ಣ ಪ್ರಾಕಾರದಲ್ಲಿ ಅವಿತರೆ
ಬಿಟ್ಟೀತೇ ಹುಚ್ಚು ಗಾಳಿ
ಮಳೆಯ ನಡುವೆ ಗೂಳಿ ನುಗ್ಗುವ ಪರಿ?
ಪಾಗರದ ನಡುವಿನಲಿ ನಮ್ಮನ್ನೇ ಕಳಕೊಂಡಾಗ
ನುಸುಳಿ ಹೊರ ಹೊರಡಲಿಕ್ಕೆ,
ಎಳೆ ಬಿಸಿಲಿನ ಅಂಬೆಗಾಲಿಡುವ ನಾಳೆಗಳ
ರಂಗವಲ್ಲಿ ಚುಕ್ಕೆ ಇಟ್ಟು ಸ್ವಾಗತಿಸುವುದಕ್ಕೆ
ಬೇಕಲ್ಲವೇ?-
ಕಾವಲು ಕಣ್ಣ ಮುಚ್ಚಿಸಿ
ತಿಂಗಳ ಬೆಳಕ ರಾತ್ರಿಗಳ ಅಟ್ಟಿ
ನಿಲ್ಲಿಸುವ ನಂದಿ-ಬೀಟೆ ಸಾಗವಾನಿಯ ಗಟ್ಟಿ
ಬಾಗಿಲು,
ಮತ್ತು
ಬಿಡುವ ನೆಮ್ಮದಿಯ ನಿಟ್ಟುಸಿರು. Read the rest of this entry »

ಸಾಹಿತ್ಯ ಸಮಾರಂವೊಂದರಲ್ಲಿ ಪಿಳ್ಳೆ (ಎಡಾಗದವರು)

ಸಾಹಿತ್ಯ ಸಮಾರಂಭವೊಂದರಲ್ಲಿ ಪಿಳ್ಳೆ (ಎಡಭಾಗದವರು)

ಕೆ ಜಿ ಶಂಕರ ಪಿಳ್ಳೆ. ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.
ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ’, `ಬೊಕ್ಕ’, `ತರಾವರಿ ಪೋಜಿನ ಫೋಟೋಗಳು’, `ಜಿಡ್ಡು ಮೆತ್ತಿದ ಆರಾಮಕುರ್ಚಿ’, `ಉಡುದಾರ’, `ಬಂಗಾಲ್‌’ ಮೊದಲಾದ ಕವಿತೆಗಳನ್ನು ಓದುತ್ತಾ ಓದುತ್ತಾ ಕಾವ್ಯಾಸಕ್ತರಾದ ನೀವು ಥ್ರಿಲ್‌ ಆಗಿರುತ್ತೀರಿ. ಕನ್ನಡದಲ್ಲಿ ಅಡಿಗರನ್ನು, ಲಂಕೇಶರನ್ನು ಓದಿ ಮೆಚ್ಚಿ ಆರಾಸುವವರು ಈ ಸಂಕಲನವನ್ನೂ ಅಷ್ಟೇ ಪ್ರೀತಿಯಿಂದ ಪರಿಗ್ರಹಿಸಲು ಸಾಧ್ಯ.
`ಬೊಕ್ಕ ಬೊಕ್ಕನ ಜೊತೆ ಮಾತನಾಡುವಾಗ
ಬಚ್ಚಿಡುವಂಥದ್ದು ಏನೂ ಇಲ್ಲ.
ಒಂದು ನಾಜೂಕಿನ ನಗೆಯಲ್ಲಿ
ಭೂತವೋ ಭವಿಷ್ಯವೋ ಏನು ಬೇಕಾದರೂ
ಪ್ರತಿಬಿಂಬಿಸಲು ಪ್ರಯಾಸವಿಲ್ಲ

ಆದರಿಂದು,
ಕವಿ ಕವಿಯ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಯಾತ್ರಿಕ ಯಾತ್ರಿಕನ ಜೊತೆ ಮಾತಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ನೆರೆಯವ ನೆರೆಯವನ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಇಂಡಿಯಾ ಚೀನಾ ಜೊತೆ ಮಾತನಾಡುವಾಗ
ಬಚ್ಚಿಡುತ್ತವೆ ಎಲ್ಲವನ್ನೂ….’
-ಎಂದೆಲ್ಲಾ ಬರೆದು ಬೆಚ್ಚಿ ಬೀಳಿಸುವ ಅವರ ಕವಿತೆಗಳಲ್ಲಿ ನಿತ್ಯ ನೈಮಿತ್ಯಿಕ ವಿಷಯಗಳೇ ವಸ್ತುಗಳಾಗಿವೆ. ಆದರೆ ಆ ನಮ್ಮ ನಿತ್ಯದಲ್ಲೇ ಇರುವ ಸಂಗತಿಯಲ್ಲಿ ಅವರು ಸುರಿಸುವ ಜಿಜ್ಞಾಸೆ, ಓದೇ ಅನುಭವಿಸಬೇಕಾದ ಸಂಗತಿ.
ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಕೆಜಿ ಶಂಕರ ಪಿಳ್ಳೆಯವರ ಕವಿತೆಗಳು‘ ಸಂಕಲನ ಇದೀಗ ಮಾರುಕಟ್ಟೆಯಲ್ಲಿದೆ. ಮಲೆಯಾಳಂ ಮತ್ತು ಕನ್ನಡ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿ ಅನುಭವವಿರುವ ತೇರ್‌ಳಿ ಶೇಖರ್‌ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರ ಅನುವಾದದ ಸೊಗಸು ಎಷ್ಟು ಅದ್ಭುತವಾಗಿದೆ ಎಂದರೆ ಮೂಲದ ಲಯ ಒಂಚೂರೂ ಆಚೀಚೆ ಆಗಿಲ್ಲ. ಪಿಳ್ಳೆ ಕವಿತೆಗಳ ಲಯವೇ ಭಿನ್ನ. ಅದನ್ನು ಅನುವಾದದಲ್ಲೂ ಉಳಿಸಿಕೊಳ್ಳುವುದು ಅನುವಾದಕರಿಗೆ ಸಾಧ್ಯವಾಗಿದೆ ಎನ್ನುವುದು ಕಾವ್ಯಪ್ರೇಮಿಗಳಿಗೆ ಖುಷಿಯ ವಿಷಯ.
ಆ ಮೂಲ ಕಾವ್ಯದ ಪುಳಕಕ್ಕೆ, ಅನುವಾದದ ಜಲಕ್‌ಗೆ ಇಲ್ಲಿ ಒಂದೆರಡು ಕವಿತೆಗಳನ್ನು ನೀಡಲಾಗುತ್ತಿದೆ, ಓದಿ. ನೀವೇ ಇಷ್ಟಪಟ್ಟು ಆ ಸಂಕಲನವನ್ನು ಹುಡುಕಿ ಹೋಗಿಬಿಡುತ್ತೀರಾ.

ಕಾಗೆ
ಗುಡ್ಡ ನಿಂತಿದೆ ಗುಡ್ಡವಾಗಿಯೇ
ಗುಡ್ಡದ ಮೇಲೆ ಮಾವು ನಿಂತಿದೆ ಮಾವಾಗಿಯೇ
ಮಾವಿನ ಕೆಳಗೆ ಹಸು ಮೇಯುತ್ತಿದೆ ಹಸುವಾಗಿಯೇ
ಮಾವಿನ ಕಣ್ಣಿಗೆ ಕಾಗೆ ಕುಟುಕುವಾಗ
ಮಾವು ಅಲುಗಾಡುತ್ತದೆಹಸುವಾಗಿಯೇ
ಗುಡ್ಡದ ಬಾಲಕ್ಕೆ ಕಾಗೆ ಕುಟುಕುವಾಗ
ಗುಡ್ಡ ಅಲುಗಾಡುತ್ತದೆ ಹಸುವಾಗಿಯೇ

ನಾನು
ವೇಶ್ಯೆಯಾಗಿದ್ದಳು ನನ್ನ
ಮುದಿ ಮುದಿ ಮುತ್ತಜ್ಜಿ
ಹೆಣ್ಣಾಗಿದ್ದರೆ
ನಾನೂ
ವೇಶ್ಯೆಯಾಗುತ್ತಿದ್ದೆ.

ವಿಟನಾಗಿದ್ದ ನನ್ನ
ಮುದಿ ಮುದಿ ಮುತ್ತಾತ
ಗಂಡಾಗಿದ್ದರೆ
ನಾನೂ
ವಿಟನಾಗುತ್ತಿದ್ದೆ.

ಶಬ್ದಾಸುರನ ನಗರದಲ್ಲಿ
ಒಂದು ಹಿಂಡು ಕಿವಿಗಳು
ಅಲೆಯುತ್ತಿವೆ
ಮೌನವನ್ನು ದತ್ತು ಪಡೆಯಲು,
ಶಬ್ದಾಸುರನ ನಗರದಲ್ಲಿ.

ಒಲವಿನಂತೆಯೋ
ಒತ್ತೆಯಂತೆಯೋ
ಪಿ. ಎಫ್‌. ಲೋನಿನಂತೆಯೋ
ಬಂಡೆ ರಾಶಿಯಂತೆಯೋ
ೃಹತ್‌ ತಟಾಕದಂತೆಯೋ
ಥಟ್ಟನೆ

ಆವಿಯಾಗಿ ಮರೆಯಾದ ಮೌನವನ್ನು.
ಕೆತ್ತಿ ಕೆತ್ತಿ ಶಿಲ್ಪಗಳನ್ನೋ
ಮೊಗೆದು ನೆನಸಿ ಹಣ್ಣುಗಳನ್ನೋ
ಬೆಳೆಸಬಹುದಾದ ಮೌನವನ್ನು.

ಅರ್ಥ
ಭಾಷೆಯ ದಾರದಲ್ಲಿ ಪೋಣಿಸಿ
ಜಗತ್ತನ್ನು
ಗಡಿಯಾರದಂತೆ
ಹೊತ್ತು ನಡೆಯುತ್ತೇನೆ
ಎತ್ತ ಹೋಗುವಾಗಲೂ
ಏನೇ ಮಾಡುವಾಗಲೂ

ಆದ್ದರಿಂದ
ಯಾವ ದೂರಕ್ಕೂ
ಯಾವ ಕರ್ಮಕ್ಕೂ
ಯಾವ ಮಾತಿಗೂ
ಯಾವ ತಾಳಕ್ಕೂ
ಯಾವ ಹೊತ್ತಲ್ಲೂ
ಒಂದೇ ಒಂದು ಅರ್ಥ: ಕಾಲ.

(ಮುಂದಿನ ಓದಿಗೆ ನೀವು ಆ ಸಂಕಲನವನ್ನು ತೆಗೆದುಕೊಳ್ಳಲೇಬೇಕು.)

still3ಮೊನ್ನೆ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಜಗತ್ತಿನ ಇಡೀ ಭಯೋತ್ಪಾದನೆಯನ್ನು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮಗಳ ಕುಲುಮೆಯಲ್ಲಿ `ಜ್ವಲಿಸುತ್ತಿರುವ ತಾಜ್‌ ಹೊಟೇಲ್‌’ ಭಯೋತ್ಪಾದನೆಯ ಸಂಕೇತವಾಗಿ ಹೋಗಿದ್ದೂ ಆಗಿದೆ. ಆದರೆ ಭಯೋತ್ಪಾದನೆ ಜಗತ್ತನ್ನು ಸುಡುತ್ತಾ ಬಂದು ಎಷ್ಟೋ ವರ್ಷಗಳಾದವು. ಅದರ ಬಿಸಿ ಮುಂಬೈ, ದೆಹಲಿ, ಬೆಂಗಳೂರುಗಳನ್ನು ತಟ್ಟಿದ್ದೂ ಇತ್ತೀಚೆಗೇನಲ್ಲ.
ಆದರೆ ಕಳೆದ ಒಂದು ವರ್ಷದಿಂದೀಚೆ ಭಯೋತ್ಪಾದಕ ಕೃತ್ಯದ ಮೇಲೆ ಹಿಂದಿಯಲ್ಲಿ ಒಂದೇ ಸಮನೆ ಚಿತ್ರಗಳು ತಯಾರಾಗುತ್ತಿವೆ. `ಮುಂಬೈ ಮೇರಿ ಜಾನ್‌’, `ಎ ವೆಡ್ನೆಸ್‌ಡೇ’, `ಆಮೀರ್‌’ ಹಾಗೂ `ಶೂಟ್‌ ಆನ್‌ ಸೈಟ್‌’ ಅಂಥ ನಾಲ್ಕು ಸಿನಿಮಾಗಳು. ಅವುಗಳಲ್ಲಿ `ಎ ವೆಡ್ನೆಸ್‌ಡೇ’ ಚಿತ್ರವನ್ನು ನಮ್ಮ ಗಾಂನಗರವೂ ನೋಡಿಬಿಟ್ಟಿದೆ. ಮೇಕಿಂಗ್‌ ದೃಷ್ಟಿಯಿಂದ ಉತ್ತಮ ಚಿತ್ರವನ್ನಾಗಿ ಅದನ್ನು ನೋಡಬಹುದಾದರೂ ಅದು ಪ್ರತಿಪಾದಿಸುವ ಮೌಲ್ಯ, ಅಂತರಂಗದಲ್ಲಿ ಅದಕ್ಕಿರುವ ರಂಜಕ ಗುಣ, ಪ್ರಚೋದಿಸುವ ಮನಸ್ಥಿತಿಯನ್ನು ಯಾರಾದರೂ ಪ್ರಶ್ನಿಸಿಯಾರು.
ಅವುಗಳಲ್ಲಿ `ಮುಂಬೈ ಮೇರಿ ಜಾನ್‌’ ಮತ್ತು `ಆಮೀರ್‌’ ಹೆಚ್ಚು ಸಂವೇದನೆಯ ಸಿನಿಮಾ. ಅದರಲ್ಲೂ `ಆಮೀರ್‌’ ಒಂದು ಘಟನೆಯ ಕತೆಯಾಗುತ್ತಲೇ ಸಾಮಾನ್ಯರ ಜಗತ್ತಿನ ತಲ್ಲಣದ ನೇರ ಪ್ರಸಾರವೂ ಆಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿಯ ಒಂದು ದಿನದ ಬದುಕಲ್ಲಿ ಎದುರಾಗುವ ಹಠಾತ್‌ ಬೆಳವಣಿಗೆ, (ಈಗಿನ ಭಯೋತ್ಪಾದಕ ವಾತಾವರಣದಲ್ಲಿ)ನಮ್ಮ ನಿಮ್ಮ ಮನೆಯಲ್ಲಿ ಕೂಡ ಆಗಬಹುದಾದ ವಾತಾವರಣವಾಗಿ ಕಾಣುತ್ತದೆ. ಆ ಚಿತ್ರದ ವ್ಯಕ್ತಿ ಹಂತಹಂತವಾಗಿ ನಾವೆಲ್ಲರೂ ಆಗಿ ಬದಲಾಗುವುದರಲ್ಲೇ ಚಿತ್ರದ ಯಶಸ್ಸಿದೆ. ಏನಿಲ್ಲ, ಇವತ್ತು (ಭಾನುವಾರ, 4,ಜನವರಿ 2009) `ಆಮೀರ್‌’ `ಎನ್‌ಡಿಟೀವಿ ಕಲರ್ಸ್‌’ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ನೋಡಿ. ಇಲ್ಲದಿದ್ದರೆ ಆ ಚಿತ್ರದ ಡಿವಿಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹುಡುಕಿದರೆ ಕಷ್ಟವೇನಿಲ್ಲ.
ಸಿನಿಮಾ ಹ್ಯಾಗಿದೆ? ಮುಂದೆ ಓದಿ. Read the rest of this entry »

IND0160Bಗೋಡೆಯ ಮೇಲೆ ಹೊಸ ಕ್ಯಾಲೆಂಡರ್‌ ಹಾಕಬೇಕು, ಎಲ್ಲಾದರೂ ಡೇಟ್‌ ಬರೆಯಬೇಕಾಗಿ ಬಂದಾಗ ಬದಲಾದ ಇಸ್ವಿಯನ್ನು ನೆನಪು ಮಾಡಿ ನೆನಪಿಟ್ಟುಕೊಳ್ಳಬೇಕು. ಜನವರಿಯಿಂದಾದರೂ ಸರಿಯಾಗುತ್ತೇನೆ ಎಂದು ಮತ್ತೊಂದು ವರ್ಷ ಹೊಸ ರೆಸಲ್ಯೂಷನ್‌ ತೆಗೆದುಕೊಳ್ಳಬೇಕು. ಈ ವರ್ಷದಿಂದ ಕುಡಿತವನ್ನು ಬಿಟ್ಟೆ, ಇನ್ನು ಸಿಗರೇಟು ಮುಟ್ಟುವುದೇ ಇಲ್ಲ ಎಂದೆಲ್ಲಾ ನೆಂಟರಿಷ್ಟರ ಹತ್ತಿರ ಜನವರಿ ಮೊದಲ ವಾರದಲ್ಲೇ ಕೊಚ್ಚಿಕೊಳ್ಳುವುದಾದರೆ ಕೊಚ್ಚಿಕೊಳ್ಳಿ. ಇಲ್ಲದಿದ್ದರೆ ಜನವರಿ ಮುಗಿಯುತ್ತಲೇ ಜಾರಿಗೆ ಬಂದ ಆ ರೆಷಲ್ಯೂಷನ್‌ ಜಾರಿ ಹೋಗಿಬಿಡಬಹುದು.
ಜನವರಿ ಒಂದು ಥರ ಸ್ಟಾಕ್‌ ಕ್ಲಿಯರೆನ್ಸ್‌ ತಿಂಗಳು. ಕಳೆದ ವರ್ಷ ಬಾಕಿ ಇಟ್ಟುಕೊಂಡ ವಿಷಯಗಳನ್ನೆಲ್ಲಾ ಮುಗಿಸಲೇಬೇಕಾಗುತ್ತದೆ. ತೆಗೆದುಕೊಳ್ಳಬೇಕಾದ ಹೊಸ ವಸ್ತು, ಹಣ ತೊಡಗಿಸಬೇಕಾದ ಮ್ಯೂಚುವಲ್‌ ಫಂಡ್‌, ಪ್ರಾರಂಭಿಸಬೇಕಾದ ಹೊಸ ವ್ಯಾಪಾರ, ನಿಲ್ಲಿಸಲು ನಿರ್ಧರಿಸಿದ ಜಗಳ, ತೆಗೆದುಕೊಳ್ಳಬೇಕೆಂದುಕೊಂಡ ಸೈಟ್‌, ಕೊಂಡ ಸೈಟ್‌ನಲ್ಲಿ ಕಟ್ಟಿಸಲು ಶುರುಮಾಡಬೇಕಾದ ಮನೆ, ತುಂಬಬೇಕಾದ ಸಾಲ, ಭರಿಸಬೇಕಾದ ಬಡ್ಡಿ ಇತ್ಯಾದಿ ಇತ್ಯಾದಿ. ಹಳೆಯ ವರ್ಷದಲ್ಲಿ ಬಿಡುಗಡೆ ಮಾಡಬೇಕಾಗಿದ್ದ ಚಿತ್ರವನ್ನು ಬೇಕೆಂದೇ ಮುಂದೂಡಿ, ಹೊಸ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದುಕೊಂಡಿದ್ದೆಲ್ಲಾ ಆಗುತ್ತದಾ, ಬಿಡುಗಡೆಯಾದ ಚಿತ್ರ ಹಿಟ್‌ ಆಗುತ್ತದಾ ಎಂದೇ ಚಿಂತಿಸುತ್ತಾ ಜನವರಿ ಪ್ರತಿ ಹೊಸವರ್ಷಕ್ಕೂ ಒಂದು ಥರದ ಜನ`ವರಿ’ಯೇ ಆಗುತ್ತದೆ.
ಹೊಸ ವರ್ಷ ಎಂದರೆ ಸಂಭ್ರಮ. ಅಲ್ಲಿ ಇರುವುದು ಭರವಸೆ. ಆದರೆ ಆ ಭರವಸೆ ಹೆಚ್ಚಿನ ಸಂದರ್ಭದಲ್ಲಿ ಕ್ಷಣಿಕ, ಕೆಲವೊಂದು ಶಾಶ್ವತ. ಕಾಲೇಜಿನ ಎಷ್ಟೋ ಹುಡುಗ, ಹುಡುಗಿಯರು ಮಾತು ಬಿಟ್ಟಿದ್ದರೂ ಹೊಸ ವರ್ಷದಂದು ದೋಸ್ತರಾಗುತ್ತಾರೆಂಬುದು ಒಂದು ಶಾಶ್ವತ ಭರವಸೆ. ಬೈಯುವ ಮಾಸ್ತರು, ಲೆಕ್ಚರರ್‌ಗಳು ವಿದ್ಯಾರ್ಥಿಗಳನ್ನು ಹೊಸ ವರ್ಷದ ದಿನವಾದರೂ ಚೆನ್ನಾಗಿ ಮಾತಾಡಿಸುತ್ತಾರೆ ಎಂಬ ಭರವಸೆ ಕಾಲೇಜಿನ ಕ್ಲಾಸ್‌, ಪಿರಿಯಡ್‌ಗಳಿಗೆ. ಇದು ಕ್ಷಣಿಕ ಆಗಿರಲೂಬಹುದು. ರೇಗುವ ಕಂಡಕ್ಟರ್‌, ಸರಿಯಾಗಿ ಮಾತಾಡಿಸದೇ ದಿನಾ ಟೆಕ್ಕಿಗಳನ್ನು ತುಂಬಿಸಿಕೊಳ್ಳುವ ಕ್ಯಾಬ್‌ಡ್ರೈವರ್‌, ಪ್ರಾಜೆಕ್ಟ್‌ ಹೆಡ್‌, ಸರ್ಕಾರಿ ಆಸ್ಪತ್ರೆ ಡಾಕ್ಟರ್‌, ಮಹಾನಗರ ಪಾಲಿಕೆಯ ಸಿಬ್ದಂದಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳೆಲ್ಲಾ ಆ ಒಂದು ದಿನವಾದರೂ `ಹ್ಯಾಪಿ ನ್ಯೂ ಈಯರ್‌’ ಸ್ವೀಕರಿಸಿ, ನಗುತ್ತಾ `ವಿಶ್‌’ವಾಸ ತೋರಿಸಬಹುದು ಎಂಬುದು ಶಾಶ್ವತವೋ, ಕ್ಷಣಿಕವೋ- ನಿರ್ಧರಿಸಲಾಗದ ಭರವಸೆ. Read the rest of this entry »

ಅವಳು ಹೊರಗೆ, ಇವಳು ಬಳಿಗೆ

Posted: ಡಿಸೆಂಬರ್ 30, 2008 in vikas

ಸ್ಪ್ರಾಗ್‌ ಫೋಟೋ ಸ್ಟಾಕ್‌

ಚಿತ್ರಕೃಪೆ: ಸ್ಪ್ರಾಗ್‌ ಫೋಟೋ ಸ್ಟಾಕ್‌

ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿಸುತ್ತದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ನಿರೀಕ್ಷೆ, ಕಾತರದ ಕಣ್ಣುಗಳು. ಪ್ರತಿ ವರ್ಷ ಕಳೆಯುವಾಗಲೂ ಆ ವರ್ಷ `ಸಾಕಪ್ಪಾ’ ಎನಿಸಿರುತ್ತದೆ, ಅಯ್ಯೋ ಈ ವರ್ಷದಷ್ಟು ಕೆಟ್ಟದಾಗಿ ಯಾವುದೂ ಇರಲಿಲ್ಲ ಎಂಬ ಭ್ರಮೆ ಮೂಡುತ್ತದೆ. ಅಂದರೆ ಮನೆಯ ಅಜ್ಜಿಯಂತೆ ಆಕೆ ಯಾರಿಗೂ ಬೇಡ. ಹೊಸ ವರ್ಷ ಮನೆಗೆ ಬರುತ್ತಿರುವ ಹೊಸ ಹೆಣ್ಣಂತೆ, ಎಲ್ಲರಿಗೂ ಕುತೂಹಲ.
ಗೋಡೆಯ ಮೇಲೆ ಕ್ಯಾಲೆಂಡರ್‌ ಬದಲಾಗಿ, ಸಹಿ ಕೆಳಗೆ ಬರೆಯುವ ದಿನಾಂಕಗಳು ಬದಲಾಗಿ, ಇಸವಿಗೆ ಒಂದು ವರ್ಷ ಹೆಚ್ಚು ವಯಸ್ಸಾಗಿ ಜಗತ್ತು ಮುಂದಡಿ ಇಡುತ್ತಿದೆ. ಡಿಸೆಂಬರ್‌ನ ಚಳಿ, ನವೆಂಬರ್‌ನ ಬಾಂಬ್‌ ದಾಳಿ, ಈ ವರ್ಷದ ಕೊನೆಯ ರಿಸೆಷನ್‌ ಭೂತ, ಸಮರ ಭೀತಿ-ಗಳ ಮಧ್ಯೆ ಬೆಳಗ್ಗೆ ಬರುವ ಸೂರ್ಯನಂತೆ ಹೊಸ ವರ್ಷ ಬರುತ್ತಿದೆ. ಆದರೆ ಆ ಹೊತ್ತಿಗೆ ಕಳೆದ `ಹಳೆಯ ವರ್ಷ’ ನಮ್ಮ ಬ್ಲಾಗ್‌ನ ಕವಿತೆಗೆ ಕಂಡಿದ್ದು ಹೀಗೆ.
ಹೇಗೆ?

`ಅ-ಮೃತವರ್ಷಿಣಿ’ ಕವಿತೆ ಏನನ್ನುತ್ತಿದೆಯೋ, ಹಾಗೆ.

ಒಂದೇ ವರ್ಷದ ಹಿಂದೆ
ವರ್ಷಾರಂಭದ ತಾರೀಕುಗಳ,
ವಾರಗಳ,
ದಿವಾ, ಗಳಿಗೆಗಳ
ಮನೆಗೆ ನಗುನಗುತ್ತಾ ಕಾಲಿಟ್ಟವಳು
ಆಕೆ, ವರ್ಷಿಣಿ.

ಹಳೆಯ ಕಸಗಳ
ಒಂದೂ ಬಿಡದೇ ಎತ್ತಿ ಎಸೆದು
ಹೊಸ ಸರಸಗಳ
ಮೆಲ್ಲ ಮೆಲ್ಲ ಎತ್ತಿಟ್ಟು
ಎಲ್ಲರನ್ನೂ ಮುತ್ತಿಟ್ಟಳು,
ಹಸಿದ ಬಾಯಿಗಳಿಗೆ ತುತ್ತಿತ್ತಳು.
ಈ ಜಗತ್ತಿನ ಎಲ್ಲಾ
ಸಂಭ್ರಮಗಳೂ
ಇವಳ ಮಡಿಲ ಮೇಲಾಡಿ,
ಸಂಕಟಗಳೆಲ್ಲಾ
ಒಡಲನ್ನು ಹುಡಿಮಾಡಿ
ಹಾರಿ ಹೋದವು ಕಾಲದ
ರೆಕ್ಕೆಯ ಮೇಲೆ… Read the rest of this entry »

parzania-2005-9b(ಧರ್ಮಾಂಧತೆಗೆ ಬಲಿಯಾದ ಜಗತ್ತಿನ ಎಲ್ಲಾ ಅಮಾಯಕರಿಗೆ ಮಿಡಿಯುವ ಬರಹ)

ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ  ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.
`ಪರ್ಜಾನಿಯಾ’ ಕತೆ ಗೋಧ್ರಾ ದುರಂತದ ನಂತರ ನಡೆಯುವ  ಅಹ್ಮದಾಬಾದ್‌ನ ಒಂದು ಘಟನೆ. ನಾಸಿರುದ್ದೀನ್‌ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ  ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್‌ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ.
ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ. Read the rest of this entry »

ಈ ಚಳಿ ಯಾಕಾಗಿದೆ, ಏನು ನಿನ್ನ ಚಳಿಯ ಲೀಲೆ, ಚಳಿಗಾಳಿ, ಚಳಿಗಾಳಿ ಸಹಿ ಹಾಕಿದೆ ಮನಸಿನಲಿ…
ಹೀಗೆ ನಮ್ಮ ಜನಪ್ರಿಯ ಚಿತ್ರಗೀತೆಗಳನ್ನೆಲ್ಲಾ ಬದಲಿಸಿಕೊಂಡು ಹಾಡುವಂತೆ, ನಡುಗುತ್ತಾ ಮುದುರುವಂತೆ ಈ ಸಲ ಚಳಿಗಾಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. `ಗರಿಮುದುರು ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು’ ಎಂಬ ಎಸ್‌ವಿ ಪರಮೇಶ್ವರ ಭಟ್ಟರ ಸಾಲುಗಳನ್ನು ಕೇಳುತ್ತಿದ್ದರೆ ನಮಗೆಲ್ಲಾ ಚಳಿಯ ಈ ದಿನಗಳೇ ನೆನಪಾಗುತ್ತವೆ.
ಕಿವಿಗೊಂದು ಮಫ್ಲರ್‌, ಮೈಗೆ ಸ್ವೆಟರ್‌, ಕಾಲಿಗೆ ಸಾಕ್ಸ್‌, ಆಗಾಗ ಉಜ್ಜಿ ಉಜ್ಜಿ ಕೈಬಿಸಿ ಮಾಡಿಕೊಳ್ಳುವ ಅಗತ್ಯ, ಬೆಂಕಿ ಕಂಡರೆ, ಬಿಸಿಲು ಬಿದ್ದರೆ ಮೈ ಒಡ್ಡುವ ತವಕ. ಬೆಳಿಗ್ಗೆಯ ವಾಕಿಂಗ್‌ ಬ್ಯಾನ್‌ ಮಾಡಿ, ಸಂಜೆಯ ಯಾವುದಾದರೂ ಮೀಟಿಂಗ್‌ ಕ್ಯಾನ್ಸಲ್‌ ಮಾಡಿ ಮನೆ ಸೇರಿಕೊಂಡು, ಕಂಬಳಿ ಸೇರಿಕೊಳ್ಳುವವರ ಸಂಖ್ಯೆ ಜಾಸ್ತಿ ಇರಬಹುದು.
ತುಟಿ ಒಡೆಯದಿರಲು ಲಿಪ್‌ಗಾರ್ಡೂ ಮೈಕೈ ಒಡೆದು ಸಿಪ್ಪೆ ಏಳದಿರಲು ವ್ಯಾಸಲಿನ್ನೂ ನಮಗೀಗ ಬೇಕಾಗಿದೆ. ಅದನ್ನು ಕೊಂಡು ತರುವವರೂ ಹೆಚ್ಚು, ಅದಕ್ಕಾಗಿ ಅಂಗಡಿಯಲ್ಲಿ ವ್ಯಾಪಾರವೂ ಹೆಚ್ಚು. ಇಂಥದೇ ಚಳಿಯ ಬಗ್ಗೆ ಶೇಕ್ಸ್‌ಪಿಯರ್‌ `ಬ್ಲೋ ಬ್ಲೋ ದೌ ವಿಂಟರ್‌ವಿಂಡ್‌’ ಎಂದು ಬರೆದ. ಅವನು ಚಳಿಗಾಳಿ ಬಗ್ಗೆ ಬರೆದ ಸಂದರ್ಭದಲ್ಲಿ ಅವನದೇ ಪಾತ್ರ ಕಿಂಗ್‌ ಲೀಯರ್‌ ತನ್ನ ಮಕ್ಕಳಿಂದ ಬೇರ್ಪಟ್ಟು, ನಿರ್ಗತಿಕನಾಗಿದ್ದ. ನಿರ್ಗತಿಕನಾಗುವುದಕ್ಕಿಂತ ಚಳಿ ಬೇರಿಲ್ಲ. `ಸುಳಿ ಸುಳಿ ಓ ಚಳಿಗಾಳಿ, ಮನುಷ್ಯಗಿಂತ ನೀ ನಿರ್ದಯವಲ್ಲ ತಿಳಿ’ ಎಂದು ಶೇಕ್ಸ್‌ಪಿಯರ್‌ ಅದ್ಭುತವಾಗಿ ಬರೆಯುತ್ತಾ ಹೋಗುತ್ತಾನೆ.
ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೂಲಕ ಮನಸ್ಸನ್ನು ಬೆಚ್ಚಗಾಗಿಸಲು ಇಲ್ಲಿ ಚಳಿಗಾಲದ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಲಾಗುತ್ತಿದೆ. ಇದನ್ನು ನ್ಯೂಸ್‌ ಏಜನ್ಸಿ, ಫೋಟೋ ಬಕೆಟ್‌ ಮೊದಲಾದ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಅವರಿಗೆಲ್ಲಾ ಕೃತಜ್ಞತೆಗಳು.

INDIA-WEATHER-WINTER22bnp131cimg0756coffee-1taipei_india-wintervacation2007-052

ಫ್ಲಿಕರ್‌

ಚಿತ್ರಕೃಪೆ: ಫ್ಲಿಕರ್‌

ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ ಅಂತಿಮವಾಗಿ ಯಾವೊಂದು ರಾಷ್ಟ್ರಕ್ಕೂ ಶಾಶ್ವತ ಸಂತೋಷವನ್ನು, ಪರಿಹಾರವನ್ನು  ಕಂಡುಕೊಟ್ಟಿಲ್ಲ. ಪರಸ್ಪರ ಸೇಡು ತೀರಿಸಿಕೊಳ್ಳಲು ಮಾತ್ರ ಅದು ಬಳಕೆಯಾಗಿದೆ. ಸಮರ ಬೇಡ ಎಂದೇ ಯಾವತ್ತಿಗೂ ಜನಸಾಮಾನ್ಯರೆಲ್ಲರೂ ಪ್ರತಿಪಾದಿಸಿದರು. `ಕೈಯ್ಯಲ್ಲಿ ಬಂದೂಕು ಕೊಡುವ ದೇವರು ಹಿಂದೂಗಳಿಗೂ ಬೇಡ, ಮುಸಲ್ಮಾನರಿಗೂ ಬೇಡ’ ಎಂದು ಮೊನ್ನೆ ಡಾ. ಯು ಆರ್‌ ಅನಂತಮೂರ್ತಿ ಹೇಳಿದರು. ಕೈ ಕೈ ಮಿಲಾಯಿಸಿ, ಸಾವು ತಂದುಕೊಂಡ ಯಾವುದೆ ರಾಷ್ಟ್ರವೂ ಮತ್ತೊಮ್ಮೆ ಸಮರವನ್ನು ಬಯಸುವುದಿಲ್ಲ. ಯಾಕೆಂದರೆ ಕದನದ ಅನಂತರದ ಸ್ಥಿತಿ ನಮಗೆಲ್ಲಾ ಗೊತ್ತು. ಮಹಾಭಾರತ ಸಮರ, ಅಶೋಕ ಮಾಡಿದ ಕದನ-ಗಳ ಪರಿಣಾಮವನ್ನು ತಿಳಿದ ರಾಷ್ಟ್ರ ನಮ್ಮದು.
ನಾವು ಈ ಕೈ ಕೈ ಮಿಲಾಕತ್‌ಗೂ ಮೀರಿದ ಪರಿಹಾರವನ್ನು ಸರ್ವ ರಾಷ್ಟ್ರಗಳ ಸಹಯೋಗದೊಂದಿಗೆ, ರಕ್ತರಹಿತ ಕ್ರಾಂತಿಯಂತೆ, ಮೌನಸಂಗ್ರಾಮದಂತೆ ಕಂಡುಕೊಳ್ಳುವ ಜರೂರತ್ತು ಇವತ್ತಿದೆ. ಯಾಕೆಂದರೆ ಅಮಾಯಕರನ್ನು ಕೊಲ್ಲುವುದನ್ನು ಬಿಟ್ಟು ಈ ಸಮರ ಬೇರೇನನ್ನೂ ಮಾಡುವುದಿಲ್ಲ. ಅಫ್ಗಾನ್‌ನಲ್ಲಿ ಕೆಲವೇ ವರ್ಷಗಳ ಹಿಂದೆ ಆದ ಸಮರದ ಪರಿಣಾಮ ನಮಗೆಲ್ಲರಿಗೂ ಮೊನ್ನ ಮೊನ್ನೆ ನಡೆದಂತೆ ಹಚ್ಚ ಹಸಿರಾಗಿದೆ. ಭಾರತ ನಡೆಸುವ ಸಮರದಲ್ಲೂ ಅಮೆರಿಕಾದಂಥ ರಾಷ್ಟ್ರ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗುತ್ತಿದೆ. ಸಮರವನ್ನು ನಾವು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟರೆ ಅದೇ ಅಸ್ತ್ರ  ಮುಂದೊಂದು ದಿನ ನಮ್ಮ ಕಡೆಗೇ ತಿರುಗುತ್ತದೆ.
ಸಮರವನ್ನು ಪ್ರತಿಭಟಿಸುತ್ತಾ, ಭಯೋತ್ಪಾದಕತೆ ನಿವಾರಣೆಗೆ ಆದಷ್ಟು ಹುಷಾರಾದ ಮಾರ್ಗವನ್ನು  ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಾ ಹಿಂದೆ ಅಫ್ಗಾನ್‌ ಸಮರದ ತರುವಾಯ ಬರೆದ
`ಅಫ್ಗಾನ್‌ಗೆ ಬನ್ನಿ ಇಫ್ತಾರ್‌ ಕೂಟಕ್ಕೆ‘ ಎಂಬ ಕವಿತೆಯನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲರ ಒಂದೊಂದು ಕೂಗೂ ನಡೆಯಲು ಅನುವಾಗಿರುವ ಸಮರವನ್ನು ಪ್ರತಿಭಟಿಸಲಿ.

(Now In afgan everything is was- ಅಫ್ಘಾನ್‌ ಗೈಡ್‌ ಒಬ್ಬ ಹೇಳಿದ್ದು.)

ಕಾಬೂಲ ವಿರಳ ಪ್ರಾಚ್ಯ ಸಂಗ್ರಹಾಲಯ,
ದರುಲಮನ್‌ ಅರಮನೆ ಆವರಣ
ಝೂನ ಮುಗ್ಧ ಜೀವಿ ಜಗತ್ತು
ಮದ್ದುಗುಂಡಿನಡಿ ಮುದ್ದೆಯಾಗಿ
ಕಾಬೂಲಿನ
ಆಲಯಗಳೆಲ್ಲಾ ಈಗ ಬಟಾ ಬಯಲು!
ಬಬೂರು ಗಾರ್ಡನಿನ ಹೊಸ ಹೂಗಳು,
ಆ ಹೂವಿನಂಥ ಜನಗಳು
ಒಟ್ಟುಗೂಡಿಸಿಟ್ಟಿದ್ದ ಅಷ್ಟೋ ಇಷ್ಟೋ ಅಗುಳು-
ನಜ್ಜುಗುಜ್ಜಾಗಿದೆ ಈಗ…

ಲೂಟಿಯಾದ ಮೇಲೆ ಕೋಟೆಯ ಬಾಗಿಲು
ಇಕ್ಕಿಕೊಂಡು
ಹಿರಿಯರ ಬಣ
ಘನ ಸರಕಾರದ ಚೌಕಟ್ಟು ಚಾಚಿತು
ನಾವು… ಇದನ್ನು
ನೀವು… ಅದನ್ನು
ನಾವೆಲ್ಲರೂ… ನಿಮ್ಮೆಲ್ಲರನ್ನೂ
ನೋಡಿಕೊಳ್ಳುತ್ತೇವೆಂದು
ಕರ್ಝಾಯಿ ಡಂಗುರ ಹೊರಡಿಸುತ್ತಿದ್ದಂತೇ-
ಕಿವಿಗೊಟ್ಟು ಆಲಿಸಿ
ಕೇಳುತ್ತಿಲ್ಲವೇ ನಿಮಗೆ-
`ಪ್ರಭು ಪ್ರಭುತ್ವವನ್ನು ಹೇರಿ
ತೋರಾಬೋರಾದಲ್ಲಿ ಈಗಾಗಲೇ
ಸೇರಿಕೊಂಡಿದ್ದಾನೆ…’
ಎಂಬ
ನಿರಾಶ್ರಿತರ ಪಿಸು ನಿಟ್ಟುಸಿರು!

ರಮ್ಜಾನ್‌ನ ಪೂರ್ಣಚಂದ್ರ ಕಾಣಿಸಿಕೊಂಡ,
ಓ ಚಂದ್ರ
ಎಲ್ಲಿ ಬೆಳುದಿಂಗಳು?
ಎಲ್ಲಾ ಮತ್ತದೇ ಧರ್ಮಾಂಧರ ತಂಗಳು
ಇನ್ನೆಲ್ಲಿ ಖುಷಿ ತಿಂಗಳು?
ಬುರ್ಖಾ ಕಿತ್ತೊಗೆದರೇನು ಬಂತು
ಯಾರಿಗೆ
ಎಲ್ಲಿಗೆ
ಮತ್ತೆ… ಯಾತಕ್ಕೆ
ಬಂದತಾಯ್ತು ಅಸಂತುಷ್ಟ ಸ್ವಾತಂತ್ರ್ಯ?

ವಿಚ್ಛಿದ್ರ ಬದುಕಿನ ಮೃತಯಾಚನೆ
ಅಬ್ಬಾ!
ಈ ಹಬ್ಬ!
ಮಾಯದ ಅಮಾಯಕರ ಮರುಕ
ನಮಾಜ್‌
ವ್ರಣ, ಹೆಣಗಳುರುಳಿದ ಕಣದಲ್ಲಿ
ರಕ್ತಸಿಕ್ತ ಇಫ್ತಾರ್‌…
ಈ ಸಾರಿ
ಅಫ್ಘಾನಿಗೆ ಬನ್ನಿ ಇಫ್ತಾರ್‌ಗೆ
ಬೇಕಾದಷ್ಟು ಉಂಡು
ಸಾಧ್ಯವಾದರೆ
ಕೊಂಡೂ ಹೋಗಿ
ಈ ರೌರವ ಔತಣ!

ಅಫ್ಘಾನಿನ ಸುತ್ತಾ
ಈಗೆಲ್ಲಾ

ಗತ… ಗತ… ಗತ…