ನಮ್ಮಜ್ಜಿ ನಾವು ಚಿಕ್ಕವರಿದ್ದಾಗ ಬೈಯುತ್ತಿದ್ದರು. ‘ಬಾಗಿಲ ಮೇಲೆ ಕುಳಿತುಕೊಳ್ಳಬೇಡ. ದೇವರು ಕೂರೋ ಜಾಗ’ ಅಂತ. ಆದರೆ ನಾವು ಅವಳ ಕಣ್ಣು ತಪ್ಪಿಸಿ ತಪ್ಪಿಸಿ, ಅವಳ ಮಾತನ್ನು ದಿಕ್ಕರಿಸುತ್ತಿದ್ದೆವು. ಮತ್ತದು ಅನಿವಾರ್ಯ ಕೂಡ ಆಗಿತ್ತು. ನಮ್ಮಂಥ ಮಧ್ಯಮವರ್ಗದ ಮನೆಗಳೂ, ಅದರ ಬಾಗಿಲುಗಳೂ ಅರಮನೆಯ ದಪ್ಪ ಬಾಗಿಲಂತೆ, ಗೋಡೆಗಳಂತೆ ವಿಸ್ತಾರ ಅಲ್ಲ. ಆದರೆ ಅದೇ ಕಿರಿದು ಬಾಗಿಲಲ್ಲಿ ನಾನು, ನನ್ನ ತಮ್ಮ, ಅಣ್ಣ, ಪಕ್ಕದ ಮನೆಗೆ ಬಂದ ಪುಟಾಣಿ ನೆಂಟ, ಅತ್ತೆ ಮಗಳು, ಮಾವನ ಮಗ….ಎಲ್ಲರೂ ಸೇರುತ್ತಿದ್ದೆವು. ಮನೆ ಕಿರಿದಾಗಿದ್ದಷ್ಟೂ ಮಂದಿ ಹೆಚ್ಚುತ್ತಾ, ಅವಕಾಶ ಸಣ್ಣದಾಗುತ್ತಾ ಕೇಕೆ ದೊಡ್ಡದಾಗುತ್ತಾ ಮನೆಯೆಲ್ಲಾ ಗಲಗಲ ಎನ್ನುತ್ತಿತ್ತು. ಅಮ್ಮ ಅಡುಗೆ ಮಾಡುತ್ತಾ, ಅಪ್ಪ ಕೆಲಸದ ನಡುವೆ ಆಗಾಗ ಸೇರಿಕೊಳ್ಳುತ್ತಾ ನಮ್ಮ ಈ ಬೇಸಿಗೆ ರಜೆಯನ್ನು ಇಪ್ಪತ್ತಮೂರು ವರ್ಷಗಳ ಹಿಂದೆ ಮಧುರ, ಸುಂದರ ಮಾಡಿತ್ತು.
ನಮ್ಮ ಕಿರು ಬಾಗಿಲು, ದೇವರಿಗೂ ಕೂರಲು ಜಾಗ ಇರದ ಆವಾಸವಾಗಿ ದೇವರಂಥ ಮಕ್ಕಳ ಜೊತೆ ಖುಷಿಯಾಗುತ್ತಿತ್ತು.
*** *** *** ***
ಬೇಸಿಗೆ ರಜೆಗೆ ಪೇಟೆಯ ಒಬ್ಬ ಮೊಮ್ಮಗ ಬರುತ್ತಾನೆ, ಬಂದವ ಅಷ್ಟೋ ಇಷ್ಟೋ ಆಡುತ್ತಾನೆ, ಕರೆಂಟ್ ಇಲ್ಲದೇ ಟಿ.ವಿ ಮುಂದೆ ಶತಪಥ ಹಾಕುತ್ತಾನೆ, ಕಂಪ್ಯೂಟರ್ ಗೇಮ್ ಇಲ್ಲವೆಂದು ಗಲಾಟೆ ಮಾಡುತ್ತಾನೆ, ನಾಲ್ಕು ದಿನಗಳ ‘ಸುದೀರ್ಘ’ ರಜೆ ಮುಗಿಸಿ, ರಾತ್ರಿ ಬಸ್ಸಿಗೆ ಹತ್ತಿ ಹಳ್ಳಿಯಿಂದ ಪಾರಾಗುತ್ತಾನೆ. ರಜೆಗೆಂದು ಪೇಟೆ ಸಂಸಾರ ವಾರಗಟ್ಟಲೆ ಹಳ್ಳಿಗೆ ದಾವಿಸುವುದಿಲ್ಲ. ಬಂದವರೂ ಎಲ್ಲಾ ಸೇರಿದರೂ ಒಂದು ಗುಂಪಾಗುವುದಿಲ್ಲ. ಒಂದೆರಡು ಸ್ವೀಟ್, ಹಲಸಿನಕಾಯಿ ಹುಳಿ, ಹಲಸಿನ ಹಪ್ಪಳಗಳನ್ನು ವಯಸ್ಸಾದ ಹೆಂಗಸು, ಪೇಟೆ ನೆಂಟರಿಗಾಗಿ ಮಾಡಲಾರಳು. ಮಾಡಿದರೂ ಕೊಂಡು ಹೋಗುವವರು ಎಷ್ಟು ಮಂದಿ?
ಈಗ ಬಾಗಿಲಲ್ಲಿ ಯಾವ ದಡಿಯ ದೇವರೂ ಕುಳಿತುಕೊಳ್ಳಬಹುದು!
*** *** *** ***
ಕಿರಿದಾಗಿದ್ದನ್ನು ಹಿರಿದು ಮಾಡುವುದಕ್ಕೆ ಎಲ್ಲರೂ ಮುಂದು. ಹಳ್ಳಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಿರುವ ವೃದ್ಧ ಅಪ್ಪ-ಅಮ್ಮ ವಾಸ ಮಾಡುವ ಮನೆ ಕಿರಿದಾಯಿತು ಎಂದು ಲ್ಯಾಪ್ಟಾಪ್ ಲೋಲ ತನಯನಿಗೆ ಅನ್ನಿಸಿ ಅದನ್ನು ಜೀಣರ್ೋದ್ಧಾರ ಮಾಡುವ ಪ್ಲ್ಯಾನು ನಡೆಯುತ್ತಿದೆ. ಅಡಿಕೆ ರೇಟು ಕಡಿಮೆ ಕಡಿಮೆ ಆದರೆ ಇರುವ ಮನೆಯನ್ನು ಮಾರಿ ಹಾಕುವ ಆಲೋಚನೆ ಮಗರಾಯನದು.
ಕಿರಿ ಬಾಗಿಲು ಹಿರಿದು ಮಾಡಿ, ಕಿರು ಮನೆಯನ್ನು ಹಿರಿದಾಗಿ ಕಟ್ಟಿಸಿ, ಕಿರು ಕೆಲಸದಿಂದ ಹಿರಿ ಕೆಲಸಕ್ಕೆ ಹಾರಿ, ಕಿರು ಸಂಬಳದಿಂದ ಹಿರಿ ಸಂಬಳಕ್ಕೆ ನೆಗೆದು, ಕಡಿಮೆಯ ಮೊಬೈಲಿನಿಂದ ಜಾಸ್ತಿಯ ಮೊಬೈಲಿಗೆ ಜಿಗಿದು, ಕಾರು, ಸೈಟು, ಹೂಡಿಕೆ, ಸಾಲಗಳಲ್ಲೂ ಹಿರಿಯದಕೆ ಪ್ರಾಶಸ್ತ್ಯ.
ಈಗ ನಿಜಕ್ಕೂ ಎಂಥ ದೊಡ್ಡ ದೇವರೂ ಅವನ ಮನೆ, ಕಾರು, ಮೊಬೈಲುಗಳಲ್ಲಿ ಕುಳಿತುಕೊಳ್ಳಬಹುದು!
*** ***** ****
ಅಗಲ ಈಗ ಎಲ್ಲರ ಪ್ರಾಶಸ್ತ್ಯ. ಚಿಕ್ಕ ಜಾಗದ ಚೊಕ್ಕ ಸಂಸಾರದ ಅಚ್ಚು ಹಾಕಿದ ಫೋಟೋಗಳಿಗೆ ಎಲ್ಲಿದೆ ಜಾಗ? ಬೆಂಗಳೂರಿನ ಗಲ್ಲಿಗಳ ವಿಸ್ತೀರ್ಣ ಈಗ ಹಿಗ್ಗುತ್ತಿದೆ. ನೃಪತುಂಗ ರಸ್ತೆ ಅಗಲವಾಗಿ, ಬನ್ನೇರುಘಟ್ಟ ರಸ್ತೆ ಅಗಲವಾಗಿ, ಅರಮನೆ ರಸ್ತೆ, ಆರ್.ಸಿ. ಕಾಲೇಜು ರಸ್ತೆಗಳು ವಿಸ್ತಾರವಾಗಿ ಮಹಾರಾಣಿ ಕಾಲೇಜು ರಸ್ತೆ ವಿಸ್ತಾರಕ್ಕೆ ಸಿದ್ಧವಾಗಿ ರಸ್ತೆ ರಸ್ತೆಗಳೂ, ಸಂದು ಗುಂಡಿಗಳೂ ‘ಅಗಲಿಕೆ’ಯ ಸಂಭ್ರಮಕ್ಕೆ ಸಂದಿವೆ.
ಪುಟ್ಟ ಇಕ್ಕಟ್ಟಿನ, ಬಿಕ್ಕಟ್ಟಿನ ಪ್ರಪಂಚದಲ್ಲಿ ಸಹಜವೂ ಸುಂದರವೂ ಆದ ಒಂದು ಸೌಂದರ್ಯ ಇತ್ತು ಎಂದು ಹಲುಬುವವರಿಗೆ ಇಲ್ಲಿ ವೇಕೆನ್ಸಿ ಇಲ್ಲ. ರಸ್ತೆ ಪಕ್ಕ ಬಿದ್ದ ಮರದಲ್ಲಿ ಚೆಲ್ಲಾಪಿಲ್ಲಿಯಾದ ಹಕ್ಕಿ ಗೂಡುಗಳಲ್ಲೂ ಒಂದು ಕಿರಿ ಬಾಗಿಲಿತ್ತು, ಆ ಬಾಗಿಲಲ್ಲೂ ದೇವರು ಕೂರದಂತೆ ಚಿಲಿಪಿಲಿ ತುಂಬಿತ್ತು. ಜಗದಗಲ, ಮುಗಿಲಗಲ, ಹೆದ್ದಾರಿಯಗಲ ಅಭಿವೃದ್ಧಿಯ ಕೊಡಲಿ, ಗುದ್ದಲಿ, ಪ್ರಹಾರ.
ಈಗ ಎಂಥ ದಡಿಯ ದೇವರೂ ನಗರದ, ಅಭಿವೃದ್ಧಿ ಶಹರದ ಬಾಗಿಲ ಮೇಲೆ ಕುಳಿತುಕೊಳ್ಳಬಹುದು!
maru pravesha chennagide.
hi vikas
nimma sinima lekhana tumba chennagirutte tumbaa bhaavanaatmka aagi breyutteeri
mudubidre rtnakaravarniya lekhan chennaagittu !
changing is life… 🙂 🙂
eno naadi shishya samachara..