ಬಾರ್ಬರ್ ಕುಚೇಲ

ಅದು ಆಖ್ಯಾನ, ಇದು ವ್ಯಾಖ್ಯಾನ

ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ ದೊಡ್ಡ ಅರಮನೆ. ಕಾವಲಿಗೆ ನೂರಾರು ಕಾಲಾಳುಗಳು. ಕಾಲಾಳುಗಳಿಗೂ ಹೊಳೆಹೊಳೆವ ಬಟ್ಟೆ. ಆದರೆ, ಕುಚೇಲ ತೊಟ್ಟ ತೊಡುಗೆ ಹರಿದಿದೆ, ಮಣ್ಣು ಮೆತ್ತಿದೆ. ಹಾಗಾಗಿ ಅವನ ಹರಕು ಬಟ್ಟೆ ಕೊಳೆಯಾದ ಕಾಲನ್ನೂ, ಕಾಲು ಹರಿದ ಬಟ್ಟೆಯನ್ನೂ ಮರೆಮಾಚಲು ನಾಮುಂದು ತಾಮುಂದು ಎಂದಿದೆ. ಆದರೆ, ಅವನ ಕೊಳೆಕಾಲೂ, ಹರಿದ ಶಾಲೂ ಸಂಕೋಚದಿಂದ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಹರಿದ ವಸ್ತ್ರಗಳಲ್ಲಿ ಕಟ್ಟಿ ತಂದ ಅವಲಕ್ಕಿಯನ್ನು.

ರಾಜಭಟ ಅವನನ್ನು ನೋಡಿದ, ನೋಡಿ ಕೇಳಿದ: ಯಾರೋ ನೀನು, ಏನು ಬೇಕು ನಿನಗೆ?

ಶ್ರೀಮಂತಿಕೆಯನ್ನು ಕಾಣುವುದೋ, ತನ್ನ ಬಡತನವನ್ನು ಮುಚ್ಚಿಟ್ಟುಕೊಳ್ಳುವುದೋ ಎಂದು ತಿಳಿಯದೇ ಗಾಬರಿಯಾಗಿರುವ ಕುಚೇಲ ರಾಜಭಟನ ಮಾತಿಗೆ ಬೆಚ್ಚಿ ತಡವರಿಸುತ್ತಾನೆ. ಕೃಷ್ಣನನ್ನು ನೋಡಬೇಕಿತ್ತು.

Read more »

ನೀನ್ ನಾನಾದ್ರೆ ನಾನ್ ನೀನೇನಾ? …

chess.gifಏನೋ ಮಸುಕು ಮಸುಕು. ಎಲ್ಲಾ ಅಸ್ಪಷ್ಟ. ಇಷ್ಟು ಹೊತ್ತಿನಲ್ಲಿ ಅದೂ ನನ್ನ ರೂಮಿನಲ್ಲಿ ಅದ್ಯಾರು? …

ಮಲಗಿದ್ದಲ್ಲೇ ಸ್ವಲ್ಪ ತಲೆ ಎತ್ತಿ ಕಣ್ಣುಜ್ಜಿಕೊಂಡರು ಶಾಂತವೇರಿ ಸಿದ್ದಪ್ಪನವರು. ಹೆಂಡತಿ ಕನಕಲಕ್ಷ್ಮೀ ಸತ್ತ ಮೇಲೆ ಅವರಿಗೆ ಒಬ್ಬರೇ ಮಲಗುವುದು ವಾಡಿಕೆ. ಊಟ ಮುಗಿದ ಮೇಲೆ ಮಗ ಚಂದ್ರಮೋಹನ್ ಬಂದು ಒಂದೈದು ನಿಮಿಷ ಅವರೊಂದಿಗೆ ಉಭಯಕುಶಲೋಪರಿ ಹರುಟುತ್ತಾ ಕುಳಿತು ಹೋಗುವುದು ಬಿಟ್ಟರೆ, ಮತ್ತೆ ಅವರ ಕೋಣೆಗೆ ಬೆಳಗ್ಗಿನವರೆಗೂ ಯಾರೂ ಬರುವುದಿಲ್ಲ. ಹೀಗಿರುವಾಗ ಅದ್ಯಾರು ತಮ್ಮ ರೂಮಿನಲ್ಲಿ ಇಷ್ಟು ಹೊತ್ತಿನಲ್ಲಿ ಕೂತಿದ್ದಾರೆ? ಸಿದ್ದಪ್ಪನವರಿಗೆ ಆಶ್ಚರ್ಯವಾಯಿತು. ಅರೆ, ಅವರೊಬ್ಬರೇ ಅಲ್ಲ. ಅವರೆದುರು ಇನ್ನೂ ಯಾರೋ ಒಬ್ಬರು ಕುಳಿತಿದ್ದಾರೆ. ಈ ಕೆಂಪು ದೀಪದ ಜೀರೋ ಕ್ಯಾಂಡಲ್ ಬಲ್ಬಿನಲ್ಲಿ ಅವರ ಮುಖ ಕೊಣಲೊಲ್ಲದು. ಮೆಲ್ಲಗೆ ತಡವರಿಸಿ ಎದ್ದರು ಸಿದ್ದಪ್ಪ. ಹಾಸಿಗೆ ಪಕ್ಕದಲ್ಲಿದ್ದ ಟೇಬಲ್ಲಿಗೆ ಒರಗಿಸಿದ್ದ ತಮ್ಮ ಊರುಗೋಲನ್ನು ಆಶ್ರಯಿಸಿದರು. ಮೆತ್ತಗೆ ಕಾಲು ಹಾಕುತ್ತಾ ಮಂಚದ ತುದಿಗೆ ನಡೆದು ಬಂದರು.

ಅಲ್ಲಿದ್ದವರು ಯಾರೂ ಎಂದು ಸೂಕ್ಷ್ಮವಾಗಿ ಗಮನಿಸಿದ ಅವರಿಗೆ ಮೈ ಜುಮ್ ಆಯಿತು. ಅಲ್ಲಿದ್ದ ಇಬ್ಬರು ಅವರೇ. ಒಂದು ಸಾಮಾನ್ಯ ಮನುಷ್ಯ ಸಿದ್ದಪ್ಪ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದಪ್ಪ. ಇಬ್ಬರೂ ಆ ಕತ್ತಲಿನಲ್ಲೇ ತಲೆ ಬಗ್ಗಿಸಿ ಕೂತಿದ್ದಾರೆ. ಎದುರಿಗಿದ್ದ ಚೆಸ್ ಬೋರ್ಡನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಾಮಾನ್ಯ ಮನುಷ್ಯ ಸಿದ್ದಪ್ಪ ಸೋಲುತ್ತಿದ್ದಾನೆ. ಮಾಜಿ ಮುಖ್ಯಮಂತ್ರಿ ಸಿದ್ದಪ್ಪ ಮೇಲುಗೈ ಸಾಧಿಸುತ್ತಿದ್ದಾನೆ.

Read more »

ಚಾಪ್ಲಿನ್ ಬದಲಾದ!

ಚಾಪ್ಲಿನ್‌ಗೆ ತಾನು ನಿರ್ದೇಶಕನಾಗಿ, ಕತೆಗಾರನಾಗಿ ಯಾವತ್ತಾದರೂ ಬದಲಾಗಬೇಕು ಅಂತ ಅನಿಸಿತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇನಾದರೂ ಹಾಗೇ ಅನಿಸಿದ್ದರೆ, ಆತ ಬದಲಾಗುವುದಕ್ಕೆ ಏನೇನು ಮಾಡಿದನೋ ಅದು ಗೊತ್ತಿಲ್ಲ. ಒಂದು ಪಕ್ಷ ಅವನಿಗೆ ಬದಲಾಗಬೇಕು ಎಂದು ದಟ್ಟವಾಗಿ ಅನಿಸಿದರೆ ಮತ್ತು ಆತ ಬದಲಾದರೆ ಹೇಗೆ? ಎಂಬ ಕಲ್ಪನೆ ಬಂದಾಗ ಹೊಳೆದಿದ್ದೇ ಈ ಕತೆ. ಕತೆಯಾದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಜಾಗ. ಇಲ್ಲಿ ಆತ್ಮಚರಿತ್ರೆಯ ಅಂಶಗಳಿಲ್ಲ. ಆದರೆ, ಚರಿತ್ರೆಯ ಅಂಶಗಳಂತೂ ಖಂಡಿತಾ ಇದೆ. ಕಲ್ಪನೆ, ಚರಿತ್ರೆ ಎಲ್ಲಾ ಒಟ್ಟುಗೊಡಿದಾಗ ಚಾಪ್ಲಿನ್ ಬದಲಾದ …

ನ್ನು ಮೂರು ಗಂಟೆ ಹೊಡೆದರೆ ಆರಾಗುತ್ತದೆ. ಅಷ್ಟಾದರೂ ಆ ರಾತ್ರಿ ಚಾಪ್ಲಿನ್ ಕಣ್ಣುಗಳಿಗೆ ನಿದ್ದೆ ಹತ್ತಿಲಿಲ್ಲ. ‘ನಾನೇನು ಮಾಡುತ್ತಿದ್ದೇನೆ?’ ಎಂಬ ಪ್ರಶ್ನೆ ಹೊಳೆದ ಈ ೧೫ ರಾತ್ರಿಗಳಲ್ಲಿ ಚಾಪ್ಲಿನ್ ಮಲಗಿದ್ದು ಸ್ವಲ್ಪ ಕಡಿಮೆಯೇ ಸರಿ. ಆದರೂ ಇಷ್ಟು ರಾತ್ರಿಗಳಲ್ಲಿ ಆಯಾಸಕ್ಕಾದರೂ ಒಂದೆರೆಡು ತಾಸು ನಿದ್ದೆ ಹೀಗೆ ಬಂದು ಹಾಗೆ ಹೋಗುತಿತ್ತು. ಆದರೆ, ಇವತ್ತು ಅದೂ ಇಲ್ಲ.

‘ನಾನೇನು ಮಾಡುತ್ತಿದ್ದೇನೋ?’, ‘ನಾನೇನು ಮಾಡಬೇಕು?’ ಅಥವಾ ‘ನಾನೇನು ಮಾಡಬಹದು?’ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಖಂಡಿತಾ ಕಷ್ಟವಲ್ಲ. ಆದರೆ, ಆ ಉತ್ತರ ಚಿತ್ರರಂಗದೆಡೆಗೆ ತನಗಿರುವ ನಂಬಿಕೆಯನ್ನೇ ತಿರುಚಿ ಹಾಕುವುದಾದರೇ ಅಂಥ ಉತ್ತರ ಬೇಕಾ? ಇದು ಚಾಪ್ಲಿನ್ ಪ್ರಶ್ನೆ. ಕಳೆದ ೧೫ ದಿನಗಳಿಂದ ಅವನು ಇದೇ ಬಗ್ಗೆ ಯೋಚಿಸುತ್ತಿದ್ದ. ಇಷ್ಟಕ್ಕೂ ಯಾರೋ ಅವನನ್ನು ಪುಸಲಾಯಿಸಿದ್ದಾಗಲೀ, ಕೆಣಕಿದ್ದಾಗಲೀ ಅಲ್ಲ. ಇದು ತನ್ನಿಂತಾನೇ ಅತ್ಯಂತ ಸಹಜವಾಗಿ ಮೂಡಿ ಬಂದ ಪ್ರಶ್ನೆ. ಇನ್ನೆಷ್ಟು ದಿನ ಇದೇ ಕಣ್ಣಾಮುಚ್ಚಾಲೆಯಾಟ? ಇನ್ನೆಷ್ಟು ದಿನ ಬಫೂನರಿ?

Read more »

ನೀ ಕೊಡೆ ನಾ ಬಿಡೆ

ಕೊಡೆಯೆಂದರೆ ಬಾಲ್ಯ, ಕೊಡೆಯೆಂದರೆ ನೆನಪು, ಕೊಡೆಯೆಂದರೆ ತಾಯಿ, ಕೊumbrella1.jpgಡೆಯೇ ನಮ್ಮನು ಕಾಯಿ! ಮಲೆನಾಡಿನಿಂದ ಬಂದ ಎಲ್ಲಾ ಜನರ ಕನಸಲ್ಲೂ ಒಂದು ಕೊಡೆ ಇದ್ದೇ ಇದೆ. ಅದು ತೀವ್ರ ಗಾಳಿ ಬೀಸುವ ಗದ್ದೆ ಬಯಲಲ್ಲಿ ಆಚೆ ಈಚೆ ಮಗಚಿಕೊಳ್ಳುತ್ತಾ, ಕೆಲವೊಮ್ಮೆ ತಲೆ ಕೆಳಗಾಗುತ್ತಾ ನಮ್ಮನ್ನು ಹಿಂಬಾಲಿಸುತ್ತಿದೆ. ಮಲೆನಾಡಿನ ಕಡೆ ಈಗಲೂ ಬಿಚ್ಚಿಟ್ಟ ಕೊಡೆಗಳೆಲ್ಲಾ ಮನೆಯ ಜಗಲಿಯಲ್ಲಿ ರಾತ್ರಿ ಪೂರ್ತಿ ಗಾಳಿಗೆ ಒಣಗುತ್ತಾ, ಬೆಳಗಿನ ಎಳೆ ಬಿಸಿಲಿಗೆ ಕನಸು ಕಾಣುತ್ತಿವೆ. ಮಳೆಗಾಲ ಮುಗಿದು, ಚಳಿ ಪ್ರಾರಂಭವಾಗಿರುವಾಗ ಮಳೆಯ, ಮಳೆಗೆ ಹಿಡಿಯುವ ಕೊಡೆಯ ಮೇಲೆ ಒಂದು ಸಣ್ಣ ನೆನಪಿನ ಬರಹ.

 ನಾವೆಲ್ಲಾ ಹೈಸ್ಕೂಲ್‌ನಲ್ಲಿರುವಾಗ ಒಂದು ಪಾಠವಿತ್ತು. ಹೆಸರು `ಕೊಡೆ ಪುರಾಣ’ ಇರಬೇಕು. ಬರೆದವರು ಪಡುಕೋಣೆ ರಮಾನಂದರಾಯರು. ಒಂದು ಲಲಿತ ಪ್ರಬಂಧವದು. ಕೊಡೆಯನ್ನು ಹೆಣ್ಣಿನಂತೆ ಹಾಗೆಂದು ಹೀಗೆಂದು ವರ್ಣಿಸುವ ಲೇಖಕರು ನಗೆಯುಕ್ಕುವಂತೆ ಕೊಡೆ ವ್ಯಾಖ್ಯಾನಕ್ಕೆ ತೊಡಗಿದ್ದರು. ಅಂತಿಮವಾಗಿ ಕೊಡೆಯನ್ನು `ತಾಯಿಯಂತೆ’ ಎಂದು ಬಣ್ಣಿಸಿದಾಗಂತೂ ಆ ಲೇಖನದ ಔನ್ನತ್ಯ ಅರ್ಥವಾಗಿತ್ತು. ಆ ಲೇಖನದೊಂದಿಗೆ ಬಾಲ್ಯದ ಕೊಡೆ ಗೆಳೆತನದ ನೆನಪು ಆಗಾಗ ಹಸಿರಾಗಿದ್ದಿದೆ. ಕೊಡೆಯೆಂದರೆ ಎಲ್ಲರಿಗೂ ತಂತಮ್ಮ ಬಾಲ್ಯ ನೆನಪಾಗುತ್ತದೆ. ಅನೇಕ ಚಿತ್ರಕಾರರು ಕೊಡೆ ಹಿಡಿದು ಸಾಗುವ ಮನುಷ್ಯಾಕೃತಿಯಿಂದಲೇ, ದೋ ಎಂದು ಸುರಿಯುವ ಮಳೆಯಿಂದಲೇ ಮಲೆನಾಡನ್ನು ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ. ಕೊಡೆ ಮಲೆನಾಡಿನ, ಮಳೆಗಾಲದ ಅನಿವಾರ್ಯ ಅಂಗವೇ ಆಗಿಹೋಗಿದೆ. ಅದು ಹೆಚ್ಚಾಗಿ ಪೇಟೆಗಳಲ್ಲಿ ಮಾತ್ರ ಬೇಸಿಗೆಯ ಆಯುಧ ಕೂಡ.

Read more »

ಆಕಾಶದ ಸಹವಾಸ ದೋಷ!

ಹಾರುವ ಯಾನ ವಿಮಾನದಲಿ ಚಿಕ್ಕವರಾಗಿದ್ದಾಗ ಬಸ್ಸೆಂದರೆ ಹತ್ತಲು ಆಸೆಪಡುವ ಕಾಲವಿತ್ತು. ಆಮೇಲೆ ಬೈಕ್‌ ಆಸೆ ಬಂತು, ಆಮೇಲೆ ಕಾರು, ಆಮೇಲೆ ರೈಲು, ಆಮೇಲೆ ವಿಮಾನ. ಆದರೆ ಈಗ ಎಲ್ಲವೂ ಬದಲಾಗಿದೆ. ಈಗ ವಿಮಾನವೂ ಮಕ್ಕಳಲ್ಲಿ ಚಿಕ್ಕ ಸಂಭ್ರಮವನ್ನು ಹುಟ್ಟುಹಾಕದೇ ಹೋಗಬಹುದು. ಆದರೆ ನಾನು ಮೊನ್ನೆ ಮೊನ್ನೆ ಮೊದಲ ಬಾರಿ ವಿಮಾನ ಹತ್ತಿದೆ, ಈ ನೆಲದ ಸಹವಾಸವನ್ನು ಸ್ವಲ್ಪ ಕಾಲ ತೊರೆದು ಆಕಾಶದ ಸಹವಾಸ ಮಾಡಿದ್ದೆ.

ಅದರ ಸಹವಾಸ ದೋಷ ಇಲ್ಲಿ ಅನುಭವವಾಗಿದೆ, ಓದಿ!

ರೇಣುಕಾ ಶರ್ಮ ಬಂದಿದ್ದರೆ ಇಲ್ಲಿ ಸ್ವರ್ಗದ ಸೀನ್‌ ಶೂಟಿಂಗ್‌ ಮಾಡಿಬಿಡುತ್ತಿದ್ದರು.

ಹಾಗನಿಸಿದಾಗ ನಾನು ಈ ಭೂಮಿಯಿಂದ ಅದೆಷ್ಟೋ ಕಿಲೋಮೀಟರ್‌ ಎತ್ತರದಲ್ಲಿದ್ದೆ. ಆಗ ವಿಮಾನದಲ್ಲಿ ಬೆಲ್ಟ್‌ ಹಾಕಿಕೊಂಡು ನಿರಾಳವಲ್ಲದ ಸ್ಥಿತಿಯಲ್ಲಿ ಕುಳಿತು, ತೆರೆಯಲಾಗದ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಹೊರಗೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ, ಹಿಂಜಿ ಹಿಂಜಿ ಆಗಸದಂಗಳದಲ್ಲಿ ಹರಡಿದಂತೆ ಕಾಣುತ್ತಿದ್ದವು ಮೋಡಗಳ ಸಾಲು, ಅದನ್ನು ಯಾರೂ ಕದ್ದೊಯ್ಯದಂತೆ ಕಾಯುತ್ತಾ ಕುಳಿತಂತಿದ್ದ ದೂರ ದಿಗಂತದಲ್ಲಿ ಸೂರ್ಯ!

ನಮ್ಮ ಅನೇಕ ಸಿನಿಮಾಗಳಲ್ಲಿ ಸ್ವರ್ಗದ ದೃಶ್ಯವನ್ನು ಶೂಟ್‌ ಮಾಡುವಾಗ ಮೋಡವೆಂದು ಭ್ರಮಿಸುವಂತೆ ಧೂಪದ ಹೊಗೆ ಹಾಕುತ್ತಿದ್ದರು, ಅದರ ಮಧ್ಯೆ ಒಂದೋ ಅನಂತನಾಗ್‌ `ಕಮಲ ನಯನ, ಕಮಲ ವದನ’ ಎನ್ನುತ್ತಾ ಹಾಡುವ ನಾರದರಾಗಿರುತ್ತಿದ್ದರು, ಇಲ್ಲದಿದ್ದರೆ ಆ ಮೋಡದಂಥ ಸೆಟ್‌ನಲ್ಲಿ ಬೆಳ್ಳಿಬೆಟ್ಟದಲ್ಲಿ ಕುಣಿಯುತ್ತಿದ್ದಾನೆ ಎಂದು ಫೀಲ್‌ ಆಗುವಂತೆ ಈಶ್ವರ ತಾಂಡವನೃತ್ಯ ಮಾಡುತ್ತಿರುತ್ತಿದ್ದ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಆ ಈಶ್ವರನ ಪಾತ್ರದಲ್ಲಿ ನಟ ಶ್ರೀಧರ್‌ ಇರುತ್ತಿದ್ದರು. ಆಗಲೇ ಈ ಹತ್ತಿಯಂಥ ಮೋಡಗಳನ್ನು ರೇಣುಕಾ ಶರ್ಮ ಆಗಿದ್ದರೆ ಶೂಟಿಂಗ್‌ಗೆ ಬಳಸಿಕೊಳ್ಳುತ್ತಿದ್ದರೇನೋ ಅನಿಸಿದ್ದು.

Read more »

ಕಳ್ಳ ಕುಳ್ಳರ ನಮಸ್ಕಾರ!

ಬ್ಲಾಗ್‌ ಮಳ್ಳರಿಗೆ ಈ ಕಳ್ಳ ಕುಳ್ಳರ ನಮಸ್ಕಾರ!
ಇದು ವಿಕಾಸ್‌ ನೇಗಿಲೋಣಿ ಮತ್ತು ಚೇತನ್‌ ನಾಡಿಗೇರ್‌ ಎಂಬ ಇಬ್ಬರು ಸ್ನೇಹಿತರು ಸೇರಿ ಪ್ರಾರಂಭಿಸುತ್ತಿರುವ ಒಂದು ಬ್ಲಾಗ್‌. ಕಳ್ಳ ಮತ್ತು ಕುಳ್ಳ ಎಂಬ ಅಭಿದಾನವನ್ನು ಇಬ್ಬರಲ್ಲೊಬ್ಬರಿಗೆ ಖಚಿತವಾಗಿ ಆರೋಪಿಸಿದರೆ ಅದು ವಿವಾದವಾಗುವುದರಿಂದ ಹೆಸರಿಸುವುದು ನಿಮಗೆ ಬಿಟ್ಟಿದ್ದು. ನಾವಿಬ್ಬರೂ ವೃತ್ತಿಯಲ್ಲಿ ಪತ್ರಕರ್ತರು. ಪ್ರವೃತ್ತಿಯಲ್ಲಿ ಇಬ್ಬರಿಗೂ ಸಿನಿಮಾ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಸಮಾನ ಅಭಿರುಚಿ ಇದೆ.

Read more »